ಕಾರ್ಕಳದಲ್ಲಿ ಕಚೇರಿಯಲ್ಲೇ ಮಹಿಳಾ ಉದ್ಯೋಗಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ತಿರುವು ಪಡೆದುಕೊಂಡಿದೆ.
ಪ್ರಕರಣದಲ್ಲಿ ಸಂತೋಷ ಯಾನೆ ಹರಿತನಯ ಎಂಬಾತನ ಹೆಸರು ಕೇಳಿಬಂದಿದೆ.
ಆತ್ಮಹತ್ಯೆ ಮಾಡಿಕೊಂಡಿರುವ ಮಹಿಳಾ ಕೋ-ಆಪರೇಟಿವ್ ಸೊಸೈಟಿಯ ಉದ್ಯೋಗಿ ಪ್ರಮೀಳ ಅವರ ಸಹೋದರ ಕಸಬಾ ಗ್ರಾಮದ ಮಾರ್ಕೆಟ್ ರೋಡ್ ನಿವಾಸಿ ಪ್ರದೀಪ್ ದೇವಾಡಿಗ ನೀಡಿದ ದೂರಿನಲ್ಲಿ ಸಂತೋಷ ಯಾನೆ ಹರಿತನಯನ ಕಿರುಕುಳದಿಂದ ಪ್ರಮೀಳ (31) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಮಾರ್ಕೆಟ್ ರೋಡ್ನಲ್ಲಿರುವ ಮಹಿಳಾ ಕೋ- ಆಪರೇಟಿವ್ ಬ್ಯಾಂಕಿನಲ್ಲಿ ಕಚೇರಿ ಸಹಾಯಕಿಯಾಗಿದ್ದ ಪ್ರಮೀಳ ಜು. 14ರಂದು ಬೆಳಿಗ್ಗೆ ಕಚೇರಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ನಿತ್ಯ 9 ಗಂಟೆಗೆ ಕಚೇರಿಗೆ ಹೋಗುವ ಪ್ರಮೀಳ ಜು. 14ರಂದು 8.20ಕ್ಕೆ ಹೋಗಿದ್ದರು. ಬೇರೆ ಉದ್ಯೋಗಿಗಳು ಕಚೇರಿಗೆ ಬರುವ ಮೊದಲೇ ನೇಣು ಹಾಕಿಕೊಂಡಿದ್ದರು. ಅಂದು ಬೆಳಿಗ್ಗೆ ಉದ್ಯೋಗ ನಿಮಿತ್ತ ಕಲಬುರಗಿಯಲ್ಲಿದ್ದ ಪ್ರದೀಪ ದೇವಾಡಿಗರಿಗೆ ಪ್ರಮೀಳ ಅವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿದಿದ್ದು, ಅವರು ಊರಿಗೆ ಬಂದು ವಿಚಾರಿಸಿದಾಗ ನರೇಶರವರ ದೂರದ ಸಂಬಂಧಿಕ ಸಂತೋಷ ಯಾನೆ ಹರಿತನಯ ಎಂಬಾತ ಕಿರುಕುಳ ನೀಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ.
ಪ್ರಮೀಳ ಈ ಕುರಿತು ತನ್ನ ಗೆಳತಿಗೆ ತಿಳಿಸಿದ್ದರು ಎನ್ನಲಾಗಿದೆ 3 ಲ.ರೂ. ಕೊಡಬೇಕೆಂದು ಹರಿತನಯ 4 ತಿಂಗಳಿಂದ ನಿತ್ಯ ಕಿರುಕುಳ ನೀಡುತ್ತಿದ್ದಾನೆ ಎಂಬುದಾಗಿ ಪ್ರಮೀಳ ಹೇಳಿಕೊಂಡಿದ್ದರು. ಈ ಕಿರುಕುಳದಿಂದ ಬೇಸತ್ತು ನೋವನ್ನು ಯಾರಿಗೂ ಹೇಳಿಕೊಳ್ಳಲಾಗದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಹರಿತನಯನ ಕಿರುಕುಳವೇ ಕಾರಣ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಐಪಿಸಿ ಸೆಕ್ಷನ್ 306 ರಡಿಯಲ್ಲಿ ಆತ್ಮಹತ್ಯೆಗೆ ಕುಮ್ಮಕ್ಕು ನೀಡಿದ ಪ್ರಕರಣ ದಾಖಲಾಗಿದೆ.