ಬೆಂಗಳೂರು: ಬೆಂಗಳೂರು ಬಂದ್ ಮುಗೀತು. ಇನ್ನೇನಿದ್ರು ಶುಕ್ರವಾರ ಕರ್ನಾಟಕ ಬಂದ್. ಕಾವೇರಿ ನೀರಿಗಾಗಿ ಕನ್ನಡ ಸಂಘಟನೆಗಳು ಅಖಂಡ ಕರ್ನಾಟಕ ಬಂದ್ಗೆ ಕರೆ ಕೊಟ್ಟಿದೆ. ಈ ಹೋರಾಟಕ್ಕೆ ಸಾಥ್ ನೀಡಿ ಅಂತ ಕರೆ ಕೊಟ್ಟವರೇ ಎಲ್ಲರ ಮುಂದೆ ಹೋಗಿ ಬೆಂಬಲ ಕೇಳ್ತಿದ್ದಾರೆ. ಬಟ್ ಇಲ್ಲೂ ಒಗ್ಗಟ್ಟು ಕೊರತೆ, ರಾಜಕೀಯ.
ಕಾವೇರಿ ನೀರನ್ನ ತಮಿಳುನಾಡಿಗೆ ಹರಿಸುತ್ತಿರೋದನ್ನ ಖಂಡಿಸಿ ಬೆಂಗಳೂರು ಬಂದ್ ಭಾಗಶಃ ಯಶಸ್ಸಾಗಿದೆ. ಈಗ ಶುಕ್ರವಾರ ಅಖಂಡ ಕರ್ನಾಟಕ ಬಂದ್. ಕನ್ನಡಪರ ಸಂಘಟನೆಗಳು ಬೆಂಗಳೂರಿನ ಬಹುತೇಕ ಕಡೆ ಮೈಕ್ನಲ್ಲಿ ಕರ್ನಾಟಕ ಬಂದ್ಗೆ ಶುಕ್ರವಾರ ಸಹಕರಿಸಿ ಅಂತ ಮೆರವಣಿಗೆಯನ್ನೂ ಮಾಡಿದರು.
ಅಲ್ಲದೇ, ಕನ್ನಡ ಚಿತ್ರರಂಗದ ನಟ-ನಟಿಯರು ಬಂದ್ಗೆ ಸಹಕಾರ ಕೊಡಬೇಕು. ಸಾಮಾಜಿಕ ಜಾಲತಾಣಗಳಿಗೆ ಸೀಮಿತ ಆಗಬಾರದು ಅಂತ ಕನ್ನಡ ಸಂಘಟನೆಗಳು ಆಕ್ರೋಶ ಹೊರಹಾಕಿದೆ. ಶುಕ್ರವಾರದ ಬಂದ್ ಗೆ ಚಿತ್ರರಂಗ ಬೆಂಬಲ ಕೊಡಬೇಕು. ನಮಗೂ ವಾಣಿಜ್ಯ ಮಂಡಳಿಗೆ ಬಹಳ ವರ್ಷಗಳ ಸಂಬಂಧ ಇದೆ. ಶುಕ್ರವಾರದ ಬಂದ್ ಗೆ ಚಿತ್ರರಂಗ ಸಪೋರ್ಟ್ ಮಾಡಬೇಕು. ಟೌನ್ ಹಾಲ್ ಬಳಿ ಪ್ರತಿಭಟನಾ ರ್ಯಾಲಿಗೆ ಬರಬೇಕು ಎಂದು ವಾಟಾಳ್ ನಾಗರಾಜ್ ಆಗ್ರಹಿಸಿದ್ದಾರೆ.
ಶುಕ್ರವಾರ ಅಖಂಡ ಕರ್ನಾಟಕ ಬಂದ್ ಫಿಕ್ಸ್:
ರಾಜ್ಯದ ಮೂಲೆ ಮೂಲೆಯಲ್ಲೂ ಕರ್ನಾಟಕ ಬಂದ್ಗೆ ಬೆಂಬಲ ಸಿಕ್ತಿದೆ. ದಕ್ಷಿಣದಲ್ಲಿ ಕಾವೇರಿ ಸಮಸ್ಯೆ, ಉತ್ತರದಲ್ಲಿ ಮಹದಾಯಿ, ಕೃಷ್ಣ ನೀರಿನ ಸಮಸ್ಯೆಗಳನ್ನೂ ಮುಂದಿಟ್ಕೊಂಡು ಬಂದ್ಗೆ ಕರೆಕೊಟ್ಟಿದ್ದಾರೆ. ಆಸ್ಪತ್ರೆ, ಔಷಧಾಲಯ, ಆಂಬ್ಯುಲೆನ್ಸ್ ಮೆಟ್ರೋ ಸೇವೆ ಬಿಟ್ಟರೆ ರಾಜ್ಯದ ಸುಮಾರು 1900ಕ್ಕೂ ಹೆಚ್ಚು ಸಂಘಟನೆಗಳು ಬಂದ್ಗೆ ಜೈ ಅಂದಿವೆ. ಪ್ರಮುಖವಾಗಿ ಓಲಾ, ಉಬರ್ ಸೇವೆಗಳು ಸ್ಥಗಿತ ಆಗಲಿದೆ. ಆಟೋರಿಕ್ಷಾಗಳು ಬೀದಿಗಿಳಿಯಲ್ಲ. ಎಲ್ಲಾ ಕಾರ್ಮಿಕ ಸಂಘಟನೆಗಳು ಕರ್ನಾಟಕ ಬಂದ್ಗೆ ಬೆಂಬಲ ಘೋಷಿಸಿವೆ.
ಇನ್ನು ಎಲ್ಲಾ ಸರಕು-ಸಾರಿಗೆ ವಾಹನ ಸಂಘಟನೆಗಳು ಬಂದ್ ದಿನ ಬೀದಿಗಿಳಿಯಲ್ಲ. ಮಾರುಕಟ್ಟೆಗಳು, ಬೀದಿ ವ್ಯಾಪಾರಿಗಳು ಕೂಡ ಕರ್ನಾಟಕ ಬಂದ್ಗೆ ಜೈ ಅಂದಿವೆ. ಹೋಟೆಲ್ಗಳು, ಚಿತ್ರಮಂದಿರಗಳು ಮಾಲ್ಗಳು ಕೂಡ ಬಂದ್ ಆಗಲಿವೆ. ಖಾಸಗಿ ಬಸ್ಸುಗಳು, ಸರ್ಕಾರಿ ನೌಕರರ ಸಂಘ ಬಂದ್ಗೆ ಜೈ ಅಂದಿವೆ. ಸದ್ಯಕ್ಕೆ ಬಿಎಂಟಿಸಿ-ಕೆಎಸ್ಆರ್ಟಿಸಿ ನೈತಿಕ ಬೆಂಬಲ ಸೂಚಿಸಿದ್ರೆ, ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟ ನೈತಿಕ ಬೆಂಬಲ ಸೂಚಿಸಿ ಸುಮ್ಮನಾಗಿದೆ.
ತಮಿಳುನಾಡು-ಅತ್ತಿಬೆಲೆ ಹೆದ್ದಾರಿ ಬಂದ್ ಮಾಡುವುದು. ಆಂಧ್ರ-ಬೆಂಗಳೂರು ಸಂಪರ್ಕದ ಹೈವೇ ಅಡ್ಡಗಟ್ಟುವುದು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆ ತಡೆಯುವುದು. ರಾಜ್ಯದ ಪ್ರಮುಖ ಹೆದ್ದಾರಿಗಳನ್ನೇ ತಡೆದು ಪ್ರತಿಭಟನೆ ಮಾಡಲು ಕನ್ನಡ ಸಂಘಟನೆಗಳು ನಿರ್ಧರಿಸಿವೆ. ಜೊತೆಗೆ ರೈಲು ನಿಲ್ದಾಣ, ಮೆಟ್ರೋ ನಿಲ್ದಾಣಗಳಿಗೆ ಮುತ್ತಿಗೆ ಹಾಕಲು ರೂಪುರೇಷೆ ರೆಡಿಮಾಡ್ತಿವೆ. ಇನ್ನು ಸಂಜೆ ವೇಳೆಗೆ ಕರ್ನಾಟಕ ಬಂದ್ನ ಅಂತಿಮ ಚಿತ್ರಣ ಸಿಗಲಿದೆ.