ಕೆಎಸ್ಆರ್ ಟಿಸಿ ಹೆಸರಿನ ವಿಚಾರದಲ್ಲಿ ಕರ್ನಾಟಕದ ವಿರುದ್ಧ ಸಮರ ಸಾರಿದ್ದ ಕೇರಳಕ್ಕೆ ಹಿನ್ನಡೆ ಆಗಿದೆ.
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಕೆಎಸ್ಆರ್ ಟಿಸಿ ಹೆಸರು ಬಳಸೋದನ್ನು ತಡೆಯಬೇಕು. ಕೆಎಸ್ಆರ್ ಟಿಸಿ ಹೆಸರು ಬಳಸಲು ತಮಗೆ ಮಾತ್ರ ಅನುಮತಿ ನೀಡಬೇಕು ಎಂದು ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಸಲ್ಲಿಸಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾ ಮಾಡಿದೆ.
ತಿರುವಂಕೂರು ರಾಜ್ಯ ಸಾರಿಗೆ 1937ರಿಂದಲೇ ಇತ್ತು. ಕೇರಳ ರಾಜ್ಯ ಉದಯವಾದ ಮೇಲೆ 1965ರಿಂದ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ಆರಂಭವಾಯಿತು. ಕೆಎಸ್ಆರ್ಟಿಸಿ ಲೋಗೊ ಮಾಡಲಾಗಿದೆ. ಕರ್ನಾಟಕ ರಾಜ್ಯವೂ ಕೆಎಸ್ಆರ್ಟಿಸಿ ಎಂದೇ ಬಳಸುತ್ತಿದೆ ಎಂದು ಕೇರಳವು ವಿವರಣೆ ನೀಡಿತ್ತು.
ಕರ್ನಾಟಕದ ಲೋಗೊದಲ್ಲಿ ಗಂಡಭೇರುಂಡ ಗುರುತು ಬಳಕೆಗೆ ಕಾಪಿರೈಟ್ ಪಡೆಯಲಾಗಿದೆ. ಕೇರಳದ ಲೋಗೊದಲ್ಲಿ ‘ಆನೆಗಳು’ ಗುರುತು ಆಗಿದ್ದು, ಪ್ರತ್ಯೇಕ ಟ್ರೇಡ್ ಮಾರ್ಕ್ ಆಗಿದೆ ಎಂದು ಕರ್ನಾಟಕ ವಾದ ಮಂಡಿಸಿತ್ತು. ಕೇರಳದ ಅರ್ಜಿಯನ್ನು ವಜಾಗೊಳಿಸುವ ಮೂಲಕ ಕರ್ನಾಟಕದ ವಾದವನ್ನು ಮದ್ರಾಸ್ ಹೈಕೋರ್ಟ್ ಎತ್ತಿ ಹಿಡಿದಿದೆ.