ಕಾಸರಗೋಡು: ಕರ್ನಾಟಕ- ಕೇರಳ ರಾಜ್ಯಗಳ ಪ್ರಮುಖ ನಾಲ್ಕು ರಸ್ತೆ ಗಳಲ್ಲಿ ಗಡಿ ಬಂದ್ ತೆರವುಗೊಳಿಸುವಂತೆ ಕೇರಳ ಸರ್ಕಾರಕ್ಕೆ ರಾಜ್ಯ ಹೈಕೋರ್ಟ್ ಬುಧವಾರ ಮಹತ್ವದ ಆದೇಶ ನೀಡಿದೆ.
ಇದುವರೆಗೆ ತಲಪಾಡಿ ಗೇಟ್ ಮೂಲಕ ಪಾಸ್ ಇದ್ದವರಿಗೆ ಮಾತ್ರ ದ.ಕ. ಜಿಲ್ಲೆ ಪ್ರವೇಶಕ್ಕೆ ಅವಕಾಶವಿತ್ತು. ಇತರ ಮಾರ್ಗಗಳಲ್ಲೂ ಅವಕಾಶ ನೀಡಬೇಕು ಎಂದು ಬಿಜೆಪಿ ಮುಖಂಡ, ವಕೀಲ ಕೆ.ಶ್ರೀಕಾಂತ್ ಕೇರಳ ಹೈಕೋರ್ಟ್ ಮೊರೆ ಹೋಗಿದ್ದರು. ಅದರಂತೆ ಷರತ್ತಿಗೊಳಪಟ್ಟು ಇತರ ನಾಲ್ಕು ಮಾರ್ಗಗಳ ಮೂಲಕವೂ ಸಂಚಾರಕ್ಕೆ ಅನುಮತಿ ನೀಡಿ ನ್ಯಾಯಾಲಯ ಆದೇಶಿಸಿದೆ.
ಅಂತಾರಾಜ್ಯ ಪ್ರಯಾಣ ಕುರಿತ ಕೇರಳ ಹೈಕೋರ್ಟ್ ಮಧ್ಯಂತರ ಆದೇಶದ ಬೆನ್ನಿಗೆ ಕಾಸರಗೋಡು ಜಿಲ್ಲೆಯಿಂದ ದಕ್ಷಿಣ ಕನ್ನಡ ಜಿಲ್ಲೆಗೆ, ತಲಪಾಡಿ ಸಹಿತ ಪಾಣತ್ತೂರು, ಮಾಣಿಮೂಲೆ, ಪೆರ್ಲ(ಸಾರಡ್ಕ) ಹಾಗೂ ಜಾಲ್ಸೂರು ಮಾರ್ಗಗಳ ಮೂಲಕ ಪಾಸ್ ರಹಿತವಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ಸಂಚಾರಕ್ಕೆ ಜಿಲ್ಲಾಡಳಿತ ಅನುಮತಿ ಕಲ್ಪಿಸಿದೆ.
ಈ ಕುರಿತು ಬುಧವಾರ ಸಭೆ ನಡೆಸಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ಬಾಬು, ಈಗ ಜಾರಿಯಲ್ಲಿರುವ ಆದೇಶವನ್ನು ಹಿಂತೆಗೆದುಕೊಂಡಿರುವುದಾಗಿ ಅವರು ಜಿಲ್ಲಾ ಮಟ್ಟದ ಕೊರೋನಾ ಕೋರ್ ಸಮಿತಿಯ ವೀಡೀಯೋ ಕಾನ್ ಫೆರೆನ್ಸ್ ನಲ್ಲಿ ತಿಳಿಸಿದರು. ಇದೇ ವೇಳೆ ಇನ್ನು ಮುಂದೆ ಆಂಟಿಜೆನ್ ಟೆಸ್ಟ್ ನಡೆಸಿ, ಅಲ್ಲಿ ಲಭಿಸುವ ನೆಗೆಟಿವ್ ಸರ್ಟಿಫಿಕೆಟ್ ಸಹಿತ ಕೋವಿಡ್ 19 ಜಾಗ್ರತಾ ಪೋರ್ಟಲ್ ನಲ್ಲಿ ನೋಂದಣಿ ನಡೆಸಿದರೆ ಮಾತ್ರ ಸಾಕಾಗುತ್ತದೆ ಎಂದವರು ಸೂಚಿಸಿದ್ದರು..
ಗ್ರಾಮಪಂಚಾಯತ್ ಗಳು ತಪಾಸಣೆಗೆ ಅಗತ್ಯವಿರುವ ಸೌಲಭ್ಯ ಏರ್ಪಡಿಸಬೇಕು, ಚೆಕ್ ಪೋಸ್ಟ್ ಗಳಲ್ಲಿ ಸಿಬ್ಬಂದಿ ಮತ್ತು ತಪಾಸಣೆ ನಡೆಸುವ ನಿಟ್ಟಿನಲ್ಲಿ ಅಗತ್ಯದ ವ್ಯವಸ್ಥೆ ಮಾಡಬೇಕು. ಇದಕ್ಕೆ ಬೇಕಿರುವ ತರಬೇತಿ ಮತ್ತು ತಾಂತ್ರಿಕ ಸೌಲಭ್ಯಗಳಿಗಾಗಿ ಜಿಲ್ಲಾ ವೈದ್ಯಾಧಿಕಾರಿಯನ್ನು ಸಂಪರ್ಕಿಸಬೇಕು ಎಂದು ಜಿಲ್ಲಾಧಿಕಾರಿ ನುಡಿದರು.
ಗಡಿ ಪ್ರದೇಶದ ನಿವಾಸಿಗಳು ನೋಂದಣಿ ನಡೆಸದೆಯೇ ಆಗಮಿಸಬಹುದು.
ಪೆರ್ಲ, ಜಾಲ್ಸೂರು, ಮಾಣಿಮೂಲೆ, ಪಾಣತ್ತೂರು ರಸ್ತೆಗಳ ಗಡಿ ಪ್ರದೇಶಗಳ ಗ್ರಾಮಪಂಚಾಯತ್ ನಿವಾಸಿಗಳು ಜಿಲ್ಲೆಗೆ ಪ್ರವೇಶ ಮಾಡುವುದಿದ್ದರೆ ನೋಂದಣಿಯ ಅಗತ್ಯವಿಲ್ಲ. ಆದರೆ ಆ ವ್ಯಕ್ತಿ ಆಯಾ ಗ್ರಾಮ ಪಂಚಾಯತ್ ವ್ಯಾಪ್ತಿ ಬಿಟ್ಟು ಇತರ ಗ್ರಾಮ ಪಂಚಾಯತ್ ಗೆ ಪ್ರವೇಶಿಸಕೂಡದು ಎಂಬುದನ್ನು ಖಚಿತಪಡಿಸುವ ಹೊಣೆ ಸಂಬಂಧಪಟ್ಟ ಗ್ರಾಮಪಂಚಾಯತ್ ಗಳದು ಎಂದು ಜಿಲ್ಲಾಧಿಕಾರಿ ಸಭೆಯಲ್ಲಿ ತಿಳಿಸಿದರು.