ಹಾಸನ: ಹೊಸ ವರ್ಷದಂದು ಹಾಸನ ಬೆಳಗಿ ಹಳ್ಳಿ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿ ಗಂಡ-ಹೆಂಡತಿ ಮೃತಪಟ್ಟಿದ್ದರು. ಬೈಕ್ನಲ್ಲಿ ಅವರ ಜತೆ ಸಾಗುತ್ತಿದ್ದ ಒಂದು ಗಂಡು ಮತ್ತು ಒಂದು ಹೆಣ್ಣು ಮಗುವಿಗೆ ಗಾಯಗಳಾಗಿದ್ದವು.
ಈಗ ಅವರ ಪೈಕಿ ಗಂಡು ಮಗು ಆಸ್ಪತ್ರೆಯಲ್ಲಿ ಪ್ರಾಣ ಕಳೆದುಕೊಂಡಿದೆ. ಒಂದೇ ಕುಟುಂಬದ ಮೂವರು ಈಗ ಅಪಘಾತದಲ್ಲಿ ಪ್ರಾಣ ಕಳೆದುಕೊಂಡಂತಾಗಿದೆ.
ಜನವರಿ 1 ರಂದು ಬೆಳಗಿ ಹಳ್ಳಿ ಗೇಟ್ ಬಳಿ ಬೈಕ್ ಮತ್ತು ಕಾರು ನಡುವೆ ಅಪಘಾತ ಸಂಭವಿಸಿತ್ತು. ಸುನಿಲ್ (32) ಅವರು ತಮ್ಮ ಪತ್ನಿ ದಿವ್ಯಾ (26), ಎಂಟು ವರ್ಷದ ಮಗ ಅಜಿತ್ ಮತ್ತು ಪುಟ್ಟ ಮಗಳನ್ನು ಬೈಕ್ನಲ್ಲಿ ಕೂರಿಸಿಕೊಂಡು ಹೋಗುವಾಗ ಕಾರಿಗೆ ಡಿಕ್ಕಿ ಹೊಡೆದು ಅವಘಡ ನಡೆದಿತ್ತು. ಈ ವೇಳೆ ಸುನಿಲ್ ಅಂದೇ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟರೆ, ದಿವ್ಯಾ ಅವರು ಜನವರಿ 2ರಂದು ಕೊನೆಯುಸಿರೆಳೆದಿದ್ದರು.
ಇಬ್ಬರು ಮಕ್ಕಳನ್ನು ಹಾಸನದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಈಗ ಗಾಯಗೊಂಡಿದ್ದ ಎಂಟು ವರ್ಷದ ಬಾಲಕ ಅಜಿತ್ ಗೌಡ (8) ಕೂಡಾ ಪ್ರಾಣ ಕಳೆದುಕೊಂಡಿದ್ದಾನೆ. ಅಪಘಾತದಲ್ಲಿ ಗಾಯಗೊಂಡಿದ್ದ ಮೃತ ದಂಪತಿಯ ಕಿರಿಯ ಪುತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ.
ಸುನಿಲ್ ದಂಪತಿ ಮತ್ತು ಮಕ್ಕಳು ಹೊಸ ವರ್ಷದ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗುತ್ತಿದ್ದರು. ಸಂಭ್ರಮದಲ್ಲಿದ್ದ ಅವರ ಕುಟುಂಬಕ್ಕೆ ಅಪಘಾತ ಬರಸಿಡಿಲಿನಂತೆ ಬಡಿದಿತ್ತು. ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಹಿರೀಸಾವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.