ಇಸ್ಲಾಮಾಬಾದ್: ಕಾಶ್ಮೀರದ ಜನತೆಗೆ, ತಮ್ಮ ನೆಲವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವ ಅಥವಾ ಸ್ವತಂತ್ರ ರಾಷ್ಟ್ರವಾಗಿ ರೂಪಿಸುವ ಎರಡು ಆಯ್ಕೆಗಳ ಕುರಿತು ಜನಾಭಿಪ್ರಾಯ ಸಂಗ್ರಹಿಸಲಾಗುತ್ತದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್, ಹೊಸ ವಿವಾದ ಸೃಷ್ಟಿಸಿದ್ದಾರೆ. ಈ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಪುನಃ ಮೂಗು ತೂರಿಸಿ ವಿಕೃತಿ ಮೆರೆದಿದ್ದಾರೆ ಇಮ್ರಾನ್ ಖಾನ್.
ಪಾಕ್ ಆಕ್ರಮಿತ ಕಾಶ್ಮೀರದಲ್ಲಿ (ಪಿಒಕೆ) ಸ್ಥಳೀಯ ಚುನಾವಣೆಗಳು ನಡೆಯಲಿರುವ ಹಿನ್ನೆಲೆಯಲ್ಲಿ ಅಲ್ಲಿನ ತರಾರ್ ಖಾಲ್ ಹಾಗೂ ಕೊಟ್ಲಿ ಪಟ್ಟಣಗಳಲ್ಲಿ ಆಯೋಜಿಸಲಾಗಿದ್ದ ಚುನಾವಣಾ ರ್ಯಾಲಿಗಳಲ್ಲಿ ಭಾಗವಹಿಸಿದ್ದ ಖಾನ್, ಈ ಹೊಸ ಪ್ರಸ್ತಾವನೆ ಮಂಡಿಸಿದ್ದಾರೆ.
ಖಾನ್ ಹೇಳಿಕೆ ತಿರುಗೇಟು ನೀಡಿರುವ ಪಿಎಂಎಲ್-ಎನ್ ಪಕ್ಷದ ಅಧ್ಯಕ್ಷ ಷರೀಫ್, ಎರಡು ರಾಷ್ಟ್ರಗಳಲ್ಲಿ ಯಾರನ್ನು ಸೇರಬೇಕೆಂಬುದು ಕಾಶ್ಮೀರಿಗರೇ ನಿರ್ಧರಿಸಲಿ ಎಂದು ಈಗಾಗಲೇ ವಿಶ್ವಸಂಸ್ಥೆ ಹೇಳಿದೆ. ಅಲ್ಲದೆ, ಕಾಶ್ಮೀರ ಸಮಸ್ಯೆಯನ್ನು ವಿಶ್ವಸಂಸ್ಥೆಯೇ ನಿವಾರಿಸಬೇಕೆಂದು ಪಾಕಿಸ್ತಾನ ಈ ಹಿಂದೆಯೇ ನಿರ್ಣಯ ಕೈಗೊಂಡಿದೆ. ಹಾಗಾಗಿ, ಖಾನ್ ಹೇಳಿಕೆ ಇತಿಹಾಸ ನಿರ್ಲಕ್ಷಿಸುವ ಹಾಗೂ ಸಂವಿಧಾನ ವಿರೋಧಿಸುವಂಥದ್ದು ಎಂದಿದ್ದಾರೆ.