ಉಡುಪಿ: ಉಡುಪಿ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಕೆ ಮಂಜುಳ ಅವರನ್ನು ಏಪ್ರಿಲ್ 7 ರಂದು ಕರ್ತವ್ಯದಲ್ಲಿ ನಿರ್ಲಕ್ಷ್ಯದ ಕಾರಣದಿಂದ ಅಮಾನತು ಮಾಡಲಾಗಿದೆ.
ಕೆ.ಮಂಜುಳ ಅವರು ತಮ್ಮ ಅಮಾನತಿನ ಕುರಿತು ಮಾಧ್ಯಮಗಳ ಮೂಲಕ ಪ್ರತಿಕ್ರಿಯಿಸಿ, ಇದೊಂದು ತನ್ನ ವಿರುದ್ಧ ದ್ವೇಷದಿಂದ ಮಾಡಿರುವ ಪಿತೂರಿ ಎಂದು ಆರೋಪಿಸಿದ್ದಾರೆ. ತಾನು ಎಲ್ಲಾ ಕೆಲಸ ಕಾರ್ಯಗಳು ಶ್ರದ್ಧೆಯಿಂದ ಮಾಡುತ್ತಿದ್ದರೂ, ನನ್ನ ವಿರುದ್ಧ ಪಿತೂರಿ ನಡೆಸಿದ್ದಾರೆ. ಮಾತ್ರವಲ್ಲದೇ, ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಅದನ್ನು ನಿರ್ಮೂಲನೆ ಮಾಡಲು ಪಣತೊಟ್ಟಿದ್ದ ನನ್ನನ್ನೇ ಅಮಾನತ್ತುಗೊಳಿಸಿದ್ದಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಭ್ರಷ್ಟಚಾರದ ಆರೋಪಗಳು ಮತ್ತು ಅಧಿಕಾರಿಗಳೇ ಸಹೋದ್ಯೋಗಿಗಳ ಮೇಲೆ ಗಂಭೀರವಾಗಿ ಆರೋಪಿಸಿದ್ದು, ಜಿಲ್ಲೆಯ ಜನರಲ್ಲಿ ಆಘಾತ ಉಂಟು ಮಾಡಿದೆ. ಉಡುಪಿ ಜಿಲ್ಲೆಯು ಶಿಕ್ಷಣ ಕ್ಷೇತ್ರದಲ್ಲಿ ಹೆಸರುವಾಸಿಯಾದ ಜಿಲ್ಲೆ, ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಂತಹ ಇಲಾಖೆಗಳಲ್ಲಿ ಇಂತಹ ಆರೋಪಗಳು ಕೇಳಿ ಬಂದರೆ ಜನರಿಗೆ ಭೀತಿ ಉಂಟಾಗುತ್ತದೆ. ಶಿಕ್ಷಣ ಇಲಾಖೆಯಲ್ಲಿ ಈ ರೀತಿಯ ಆರೋಪಗಳು ಮತ್ತು ಆಗಿರುವ ದುರ್ಘಟನೆಯನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ.
ಈ ಪ್ರಕರಣದಲ್ಲಿ ಹಲವಾರು ಆಯಾಮಗಳಿಂದ ತನಿಖಾಧಿಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸಿ ಎಲ್ಲಾ ಸತ್ಯಾಸತ್ಯತೆಗಳನ್ನು ಬಯಲು ಮಾಡಬೇಕು ಹಾಗೂ ತಪ್ಪಿತಸ್ಥರನ್ನು ಶಿಕ್ಷೆಗೆ ಒಳಪಡಿಸಿ ಅಮಾಯಕರಿಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಉಡುಪಿ ಜಿಲ್ಲಾಧ್ಯಕ್ಷರಾದ ಅಸೀಲ್ ಅಕ್ರಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.