ದೇಶದಲ್ಲಿ ಮತ್ತೆ ಕೋವಿಡ್-19 (Covid-19) ಹೊಸ ತಳಿ (JN.1) ಆರ್ಭಟ ಶುರುವಾಗಿದ್ದು, ಮುಂಜಾಗ್ರತಾ ಕ್ರಮಗಳನ್ನು ವಹಿಸುವಂತೆ ರಾಜ್ಯಗಳಿಗೆ ಕೇಂದ್ರ ಸರ್ಕಾರ ಸಲಹೆಗಳನ್ನು ನೀಡಿದೆ.
ಕೇಂದ್ರ ಆರೋಗ್ಯ ಇಲಾಖೆ ಕೊರೊನಾ ನಿಯಂತ್ರಣಕ್ಕೆ ರಾಜ್ಯಗಳಿಗೆ ಸಲಹೆ ನೀಡಿದೆ. ಮುಂಬರುವ ಹಬ್ಬಳ ಬಗ್ಗೆ ನಿಗಾ ವಹಿಸಿ. ಅಲ್ಲದೇ ಜಾಗೃತಿ ಮೂಡಿಸುವ ಕ್ರಮವಹಿಸಿ ಎಂದು ಸೂಚಿಸಿದೆ.
ಜಿಲ್ಲಾ ಆರೋಗ್ಯ ಕೇಂದ್ರಗಳಲ್ಲಿ ನಿಗಾ ವಹಿಸಬೇಕು. ನಿಯಮಿತವಾಗಿ ಇನ್ಫ್ಲುಯೆನ್ಸ ತರಹದ ಕಾಯಿಲೆಗಳ ಬಗ್ಗೆ ಎಚ್ಚರವಹಿಸಬೇಕು. ತೀವ್ರತರವಾದ ಉಸಿರಾಟದ ಕಾಯಿಲೆ ಪ್ರಕರಣಗಳನ್ನು ಮೇಲ್ವಿಚಾರಣೆ ಮಾಡಬೇಕು ಎಂದು ತಿಳಿಸಿದೆ.
ರೋಗ ಲಕ್ಷಣಗಳಿದ್ದರೆ ಪರೀಕ್ಷೆ ಮಾಡಬೇಕು. ಎಲ್ಲಾ ಜಿಲ್ಲೆಗಳಲ್ಲಿ ಕೋವಿಡ್ ಮಾದರಿ ಪರೀಕ್ಷೆ ಮಾಡಬೇಕು. ಆಸ್ಪತ್ರೆಗಳು ಸುಸಜ್ಜಿತವಾಗಿರುವಂತೆ ನೋಡಿಕೊಳ್ಳಬೇಕು. ಐಎಲ್ಐ, ಸಾರಿ ಕೇಸ್ಗಳ ಮೇಲೆ ನಿಗಾ ವಹಿಸಬೇಕು. ಚಿಕಿತ್ಸೆಗೆ ಬೇಕಾದ ಮೂಲಸೌಕರ್ಯ ಕ್ರೋಢೀಕರಿಸಿಕೊಳ್ಳಬೇಕು ಎಂದು ಸಲಹೆ ನೀಡಿದೆ.
ಪ್ರತಿ ಜಿಲ್ಲೆ ಮತ್ತು ನಗರಗಳಲ್ಲಿ ಆರ್ಟಿಪಿಸಿಆರ್, ರ್ಯಾಪಿಡ್ ಆ್ಯಂಟಿಜನ್ ಟೆಸ್ಟ್ ಮಾಡಬೇಕು. ಆರ್ಟಿಪಿಸಿಆರ್ ಪಾಸಿಟಿವ್ ಆದರೆ ಜೆನೆಮಿಕ್ ಸೀಕ್ವೆನ್ಸ್ಗೆ ಸ್ಯಾಂಪಲ್ ಕಳಿಸಬೇಕು. ಕೊವಿಡ್ ರೂಲ್ಸ್ಗಳನ್ನ ಸ್ಥಳೀಯವಾಗಿ ಜಾರಿ ಮಾಡಲು ರಾಜ್ಯಗಳಿಗೆ ಜವಾಬ್ದಾರಿ ನೀಡಲಾಗಿದೆ.
ಭಾರತದ ಕೋವಿಡ್-19 ಪರಿಸ್ಥಿತಿ ನಿಯಂತ್ರಣದಲ್ಲಿದೆ. ಆದರೂ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,828 ಕ್ಕೆ ಏರಿಕೆಯಾಗಿದೆ. ಕೇರಳದಲ್ಲಿ ಒಂದು ಸಾವು ವರದಿಯಾಗಿದೆ. ಈ ರಾಜ್ಯದಲ್ಲಿ ಇತ್ತೀಚೆಗೆ ಕೊರೊನಾ ವೈರಸ್ನ ಜೆಎನ್.1 ಉಪತಳಿ ಪತ್ತೆಯಾಗಿದೆ