ಹಿಂದೂ ದೇಗುಲದ ಗೋಡೆಯ ಮೇಲೆ ಕಿಡಿಗೇಡಿಗಳು ಹಿಂದೂಸ್ಥಾನ್ ಮುರ್ದಾಬಾದ್ ಎಂದು ಬರೆದು ವಿಕೃತಿ ಮೆರೆದ ಘಟನೆ ನಡೆದಿದೆ. ಬರಹಗಳನ್ನು ಗೀಚುವ ಮೂಲಕ ದೇವಸ್ಥಾನವನ್ನು ವಿರೂಪಗೊಳಿಸಿದ್ದಾರೆ. ಈ ಘಟನೆ ಕೆನಡಾದ ಒಂಟಾರಿಯೋ ಪ್ರಾಂತ್ಯದಲ್ಲಿ ನಡೆದಿದೆ. ಕಳೆದ ಒಂದೂವರೆ ವರ್ಷದಲ್ಲಿ ನಡೆದ ಐದನೇ ಪ್ರಕರಣ ಇದಾಗಿದೆ.
ಬುಧವಾರ ರಾತ್ರಿ ಒಂಟಾರಿಯೋದ ವಿಂಡ್ಸರ್ ನಗರದಲ್ಲಿರುವ ಸ್ವಾಮಿ ನಾರಾಯಣ ಮಂದಿರದ ಗೋಡೆ ಮೇಲೆ ‘ಹಿಂದೂಸ್ದಾನ್ ಮುರ್ದಾಬಾದ್ ಎಂದು ಬರೆದು ವಿರೂಪಗೊಳಿಸಲಾಗಿತ್ತು. ಮಾಹಿತಿ ಮೇರೆಗೆ ವಿಂಡ್ಸರ್ ಪೊಲೀಸರು ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ವಾಮಿ ನಾರಾಯಣ ದೇವಸ್ಥಾನದ ಮೇಲೆ ನಡೆದ ಮೂರನೇ ದಾಳಿ ಇದಾಗಿದೆ.
ಹತ್ತಿರದ ಸಿಸಿಟಿವಿ ಪರಿಶೀಲನೆ ನಡೆಸಿದ ಪೊಲೀಸರು ಇಬ್ಬರು ದುಷ್ಕರ್ಮಿಗಳು ರಾತ್ರಿ ಸುಮಾರು 11 ಗಂಟೆಯ ಹೊತ್ತಿಗೆ ಈ ಕೃತ್ಯ ನಡೆಸಿರುವುದನ್ನು ಪತ್ತೆ ಹೆಚ್ಚಿದ್ದಾರೆ. ಒಬ್ಬ ದುಷ್ಕರ್ಮಿ ಗೋಡೆಯ ಮೇಲೆ ಹಿಂದೂ ವಿರೋಧಿ ಬರಹಗಳನ್ನು ಬರೆದರೆ, ಇನ್ನೊಬ್ಬ ದುಷ್ಕರ್ಮಿ ಕಾವಲು ಕಾಯುತ್ತಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸ್ಟ್ಯಾಟಿಕ್ಸ್ ಕೆನಡಾ (ದೇಶದ ರಾಷ್ಟ್ರೀಯ ಅಂಕಿಅಂಶಗಳ ಕಚೇರಿ) ಅಂಕಿ-ಅಂಶದ ಪ್ರಕಾರ 2019-2021ರ ನಡುವೆ ಕೆನಡಾದಲ್ಲಿ ಧರ್ಮ, ಲೈಂಗಿಕ ದೌರ್ಜನ್ಯ, ಜನಾಂಗೀಯ ದ್ವೇಷಗಳಂತಹ ಅಪರಾಧಗಳ ಸಂಖ್ಯೆಯಲ್ಲಿ ಶೇಕಡಾ 72ರಷ್ಟು ಏರಿಕೆಯಾಗಿದೆ ಎಂದು ತಿಳಿದುಬಂದಿದೆ.