ಕಾಸರಗೋಡು: ಆತ್ಮಹತ್ಯೆ ಮಾಡಿಕೊಳ್ಳಲೆಂದು ತಾಯಿ ತಂದಿಟ್ಟಿದ್ದ ಐಸ್ಕ್ರೀಂ ಸೇವಿಸಿ ಆಕೆಯ ಮಗ ಹಾಗೂ ಸಹೋದರಿ ಮೃತಪಟ್ಟ ವಿಲಕ್ಷಣ ಘಟನೆ ಕಾಸರಗೋಡಿನ ಕಾಂಞಗಾಡ್ ನಲ್ಲಿ ನಡೆದಿದೆ.
ಮೃತ ದುರ್ದೈವಿಗಳನ್ನು ಅದ್ವೈತ್(5) ಹಾಗೂ ದೃಶ್ಯ(19) ಎಂದು ಗುರುತಿಸಲಾಗಿದೆ. ಫೆ.11 ರಂದು ವರ್ಷಾ(25) ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಳು. ಅಂತೆಯೇ ಅದಕ್ಕಾಗಿಯೇ ತಂದಿದ್ದ ಐಸ್ಕ್ರೀಂನಲ್ಲಿ ಇಲಿ ಪಾಷಾಣ ಬೆರೆಸಿ ಸ್ವಲ್ಪ ತಿಂದು ಉಳಿದಿದ್ದನ್ನು ಅಲ್ಲಿಯೇ ಟೇಬಲ್ ಮೇಲಿಟ್ಟು ಸ್ನಾನಕ್ಕೆ ತೆರಳಿದ್ದಳು. ಈ ವೇಳೆ ಅದನ್ನು ನೋಡಿದ ಅದ್ವೈತ್ ಹಾಗೂ ದೃಶ್ಯ ತಮಗಾಗಿ ಇಟ್ಟಿದ್ದೆಂದು ಐಸ್ಕ್ರೀಂ ಸೇವಿಸಿದ್ದಾರೆ. ಬಳಿಕ ಎಲ್ಲರೂ ಒಟ್ಟಿಗೆ ಕೂತು ಬಿರಿಯಾನಿ ತಿಂದು ಮಲಗಿದ್ದರು.
ಇತ್ತ ಮಲಗಿದ ಸ್ವಲ್ಪ ಸಮಯದ ನಂತರ ಅದ್ವೈತ್ ಹಾಗೂ ದೃಶ್ಯ ವಾಂತಿ ಮಾಡಲು ಶುರು ಮಾಡಿದ್ದರು. ಕೂಡಲೇ ಇಬ್ಬರನ್ನೂ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಫೆ.12ರಂದು ಮುಂಜಾನೆ ಅದ್ವೈತ್ ಮೃತಪಟ್ಟರೆ, ಫೆ.24ರಂದು ದೃಶ್ಯ ಸಾವನ್ನಪ್ಪಿದ್ದಳು. ಮೊದಲು ಬಿರಿಯಾನಿ ತಿಂದು ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಅಂದುಕೊಂಡಿದ್ದರು. ಆಧರೆ ಮರಣೋತ್ತರ ಪರೀಕ್ಷೆಯ ವೇಳೆ ಇಲಿ ಪಾಷಾಣ ತಿಂದಿರುವ ವಿಚಾರ ಬೆಳಕಿಗೆ ಬಂದಿದೆ.
ವಿಷಮಿಶ್ರಿತ ಐಸ್ ಕ್ರೀಂ ಅನ್ನು ವರ್ಷಾ ಹೆಚ್ಚು ತಿಂದಿರಲಿಲ್ಲ. ಹೀಗಾಗಿ ಆಕೆಗೆ ಏನೂ ಅಪಾಯ ಸಂಭವಿಸಿಲ್ಲ. ಇತ್ತ ಮಗ ಹಾಗೂ ಸಹೋದರಿ ಅನಾರೋಗ್ಯಕ್ಕೀಡಾದರೂ ವರ್ಷಾ ಈ ವಿಚಾರ ಬಹಿರಂಗಪಡಿಸಿರಲಿಲ್ಲ. ಆದರೆ ಸಹೋದರಿಯ ಮರಣೋತ್ತರ ಪರೀಕ್ಷೆಯ ವೇಳೆ ಇಲಿ ಪಾಷಾಣ ವಿಚಾರ ಬೆಳಕಿಗೆ ಬಂದ ನಂತರ ತಾನು ಐಸ್ ಕ್ರೀಂ ನಲ್ಲಿ ಇಲಿಪಾಷಾಣ ಬೆರೆಸಿ ಆತ್ಮಹತ್ಯೆಗೆ ಯತ್ನಿಸಿರುವುದಾಗಿ ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾಳೆ.
ಒಟ್ಟಿನಲ್ಲಿ ತಾನು ಆತ್ಮಹತ್ಯೆಗೆ ಮಾಡಿಕೊಳ್ಳಲು ನಿರ್ಧರಿಸಿ ಮಗ ಹಾಗೀ ಸಹೋದರಿ ಪ್ರಾಣ ಬಿಟ್ಟಿದ್ದಾರೆ. ಆದರೆ ವರ್ಷಾ ಆತ್ಮಹತ್ಯೆಗೆ ಯತ್ನಿಸಲು ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸದ್ಯ ವರ್ಷಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.