ಕೇರಳ : ಆರ್.ಎಸ್ಎಸ್ ಮತ್ತು ಎಸ್.ಡಿ.ಪಿ.ಐ ಕಾರ್ಯಕರ್ತರ ನಡುವೆ ನಡೆದ ಘರ್ಷಣೆಯಲ್ಲಿ ಆರ್.ಎಸ್ಎಸ್ ಕಾರ್ಯಕರ್ತನೋರ್ವ ಸಾವನ್ನಪ್ಪಿರುವ ಘಟನೆ ಕೇರಳ ಜಿಲ್ಲೆಯ ಅಲಪುಳ ಜಿಲ್ಲೆಯ ನಾಗಮಕುಲಂಗರದಲ್ಲಿ ನಡೆದಿದೆ.
ಆರ್.ಎಸ್ಎಸ್ ಕಾರ್ಯಕರ್ತ ನಂದು (22) ಎಂಬಾತನೇ ಕೊಲೆಯಾದ ದುರ್ದೈವಿ. ಬುಧವಾರ ರಾತ್ರಿ ಚೆರ್ತಲಾ ಬಳಿಯ ವಯಾಲಾರ್ನಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್) ಕಾರ್ಯಕರ್ತನನ್ನು ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್ಡಿಪಿಐ) ಕಾರ್ಯಕರ್ತರು ಹತ್ಯೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
ಘರ್ಷಣೆಯಲ್ಲಿ ಆರಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದು, ಅಲಪುಳ ಮತ್ತು ಎರ್ನಾಕುಲಂ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಬಿಜೆಪಿ ಹಮ್ಮಿಕೊಂಡಿದ್ದ ವಿಜಯಯಾತ್ರೆಯ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಕಾಸರಗೋಡಿಗೆ ಭೇಟಿ ನೀಡಿದ್ದರು. ಇದರ ಬೆನ್ನಲ್ಲೇ ಎಸ್ ಡಿಪಿಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು.
ಇದಕ್ಕೆ ಪ್ರತಿಯಾಗಿ ಆರ್ಎಸ್ಎಸ್ ಕಾರ್ಯಕರ್ತರು ಬುಧವಾರ ಎಸ್ಡಿಪಿಐ ವಿರುದ್ಧ ಘೋಷಣೆಗಳನ್ನು ಎತ್ತಿಕೊಂಡು ಪ್ರತಿಭಟನಾ ಮೆರವಣಿಗೆ ನಡೆಸಿದರು. ಎಸ್ಡಿಪಿಐ ಕಾರ್ಯಕರ್ತರು ಸಹ ಪ್ರತಿಭಟನಾ ಮೆರವಣಿಗೆ ನಡೆಸಿ ಪ್ರಚೋದನಕಾರಿ ಘೋಷಣೆಗಳನ್ನು ಕೂಗಿದರು. ಪ್ರತಿಭಟನೆ ಘರ್ಷಣೆಯಲ್ಲಿ ಕೊನೆಗೊಂಡಿದೆ. ಕ್ಷುಲಕ ಕಾರಣಕ್ಕೆ ಈ ಘರ್ಷಣೆ ನಡೆಡಿದ್ದು, ಘರ್ಷಣೆಯಲ್ಲಿ ಹಲವು ಗಾಯಗೊಂಡಿದ್ದಾರೆ. ಆರ್ ಎಸ್ಎಸ್ ಕಾರ್ಯಕರ್ತ ನಂದು ಹತ್ಯೆಯನ್ನು ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕೆ.ಸುರೇಂದ್ರನ್ ಖಂಡಿಸಿದ್ದಾರೆ.