ಸಿಟ್ಟಿನ ಭರದಲ್ಲಿ ವ್ಯಕ್ತಿಯೊಬ್ಬ ತನ್ನ ನಾಲ್ಕು ತಿಂಗಳ ಗಂಡು ಮಗುವನ್ನು ರಸ್ತೆಗೆ ಎಸೆದು ಕೊಂದಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದಲ್ಲಿ ನಡೆದಿದೆ
ಶಂಕಿತ ಆರೋಪಿಯನ್ನು ಬಸಪ್ಪ ಬಳುಂಕಿ ಎಂದು ಗುರುತಿಸಲಾಗಿದ್ದು, ಈತ ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆಯಲ್ಲಿ (ಕೆಎಸ್ಐಎಸ್ಎಫ್) ಪೊಲೀಸ್ ಪೇದೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾನೆ.
ತನ್ನ ಹುಟ್ಟೂರಾದ ಗೋಕಾಕ ತಾಲೂಕಿನ ದುರ್ದುಂಡಿ ಗ್ರಾಮದಲ್ಲಿ ಜಾತ್ರೆಯಿದೆ. ಹೀಗಾಗಿ, ಮಗುವನ್ನು ಬೈಕ್ನಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದಿದ್ದಾನೆ. ಇದಕ್ಕೆ ಪತ್ನಿ ಲಕ್ಷ್ಮಿ ವಿರೋಧ ವ್ಯಕ್ತಪಡಿಸಿದ್ದು, ಇದರಿಂದ ಕೋಪಗೊಂಡ ಬಸಪ್ಪ ಕೂಡಲೇ ಮಗುವನ್ನು ರಸ್ತೆಗೆ ಎಸೆದಿದ್ದಾನೆ. ಮಗು ರಕ್ತಸ್ರಾವವಾಗಿ ಸ್ಥಳದಲ್ಲೇ ಸಾವಿಗೀಡಾಗಿದೆ. ಕಳೆದ ಒಂದು ವರ್ಷದಿಂದ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡುತ್ತಿದ್ದ ಎಂದು ಲಕ್ಷ್ಮಿ ನೀಡಿರುವ ದೂರನ್ನು ಉಲ್ಲೇಖಿಸಿ ಪೊಲೀಸರು ತಿಳಿಸಿದ್ದಾರೆ.
ಕೆಎಸ್ಐಎಸ್ಎಫ್ ಕಾನ್ಸ್ಟೆಬಲ್ ವಿರುದ್ಧ ಕುಡಚಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ.