


ಕೊಚ್ಚಿ : ಮಾತು ಬಾರದ, ಕಿವಿ ಕೇಳದ ವಿಕಲ ಚೇತನನೊಬ್ಬನನ್ನು ಹನಿಟ್ರ್ಯಾಪ್ ಗೆ ಯತ್ನಿಸಿದ್ದು ಬಳಿಕ ಆತನ ಮೇಲೆ ಹಲ್ಲೆ ನಡೆಸಿರುವ ಘಟನೆ ಕೊಚ್ಚಿಯಲ್ಲಿ ನಡೆದಿದೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ಉತ್ತರ ಪರವೂರ್ ನ ಸಫಾ, ವೈಟ್ಟಿಲದ ಜಾನ್ ರಾಹುಲ್, ಇರುಂಪನಂನ ಅಮಲ್ ಮತ್ತು ಮರಡು ಮೂಲದ ಆನಂದ್ ಎಂಬವರನ್ನು ಬಂಧಿಸಲಾಗಿದೆ. ಮತ್ತೊಬ್ಬ ಆರೋಪಿ ಕೊಚ್ಚಿ ಮೂಲದ ಸಂಜು ತಲೆಮರೆಸಿಕೊಂಡಿದ್ದಾನೆ.
ಕೊಲ್ಲಂನ 30 ವರ್ಷದ ವಿಕಲಚೇತನ ಯುವಕನನ್ನು ಸಫಾ ಇನ್ಸ್ಟಾಗ್ರಾಂ ಮೂಲಕ ಪರಿಚಯ ಮಾಡಿಕೊಂಡಿದ್ದಳು. ಬಳಿಕ ಆತನನ್ನು ಭೇಟಿಯಾಗುವ ನೆಪದಲ್ಲಿ ಹೋಟೆಲ್ ಗೆ ಕರೆಸಿಕೊಂಡಿದ್ದಳು. ಯುವಕ ಸಂಜೆ ಹೋಟೆಲ್ ರೂಮ್ ಗೆ ಬಂದಾಗ, ಆಕೆಯ ಇತರ ಗ್ಯಾಂಗ್ ಸದಸ್ಯರಲ್ಲಿ ಕೆಲವರು ಬಾತ್ರೂಮ್ನಲ್ಲಿ ಅಡಗಿದ್ದರೆ, ಉಳಿದವರು ಹೊರಗಿನಿಂದ ಬಂದಿದ್ದರು. ಯುವಕನೊಂದಿಗೆ ಸಮ್ಮಾ ಇರುವ ಅಸಭ್ಯ ವಿಡಿಯೋಗಳನ್ನು ಚಿತ್ರೀಕರಿಸಿ ಬ್ಲ್ಯಾಕ್ಮೇಲ್ ಮಾಡುವುದು ಖದೀಮರ ಉದ್ದೇಶವಾಗಿತ್ತು.
ಯುವಕ ಬಟ್ಟೆ ಬಿಚ್ಚಲು ಮತ್ತು ಅಸಭ್ಯ ಕೃತ್ಯಗಳಲ್ಲಿ ತೊಡಗಲು ನಿರಾಕರಿಸಿದಾಗ, ಗ್ಯಾಂಗ್ ಆತನ ಮೇಲೆ ಹಲ್ಲೆ ನಡೆಸಿದೆ. ಯುವಕನ ಗೂಗಲ್ ಪೇ ಮೂಲಕ ಹಣ ಲೂಟಿ ಮಾಡಲು ಯತ್ನಿಸಿದೆ. ಆದರೆ ಖಾತೆಯಲ್ಲಿ ಹಣ ಇಲ್ಲದ ಕಾರಣ, ಕೊನೆಗೆ ಯುವಕನ ಬೆತ್ತಲೆ ಫೋಟೋಗಳನ್ನು ತೆಗೆದು ಬೆದರಿಸಿ ಕಳುಹಿಸಿದ್ದರು. ಯುವಕನ ದೂರಿನ ಮೇರೆಗೆ ಆರೋಪಿಗಳನ್ನು ಬಂಧಿಸಿರುವ ಪೊಲೀಸರು, ಆರೋಪಿಗಳ ಫೋನ್ ವಶಪಡಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ ಎಂದು ವರದಿ ಮೂಲಕ ತಿಳಿದು ಬಂದಿದೆ.








