ಪುತ್ತೂರು: ಮಡಿಕೇರಿಯ ಶುಂಟಿಕೊಪ್ಪದ ಬಟ್ಟೆ ಅಂಗಡಿ ಹಾಗೂ ಇನ್ನೊಂದು ಕಡೆ ಕಳವು ನಡೆಸಿದ್ದ ಆರೋಪದಲ್ಲಿ ಪುತ್ತೂರು ನಿವಾಸಿಯೋರ್ವನನ್ನು ಕೊಡಗು ಪೊಲೀಸರು ಪುತ್ತೂರಿನಲ್ಲಿ ಬಂಧಿಸಿದ್ದಾರೆ.
ಚಿಕ್ಕಮುಡೂರು ಗ್ರಾಮದ ತಾರಿಗುಡ್ಡೆ ಮೊಹಮ್ಮದ್ ಆಶ್ರಫ್ ಬಂಧಿತ ಆರೋಪಿ.
ಶುಂಟಿಕೊಪ್ಪದಲ್ಲಿ’ ಬಟ್ಟೆ ಅಂಗಡಿಯಿಂದ ಜ.28ಕ್ಕೆ 1 ಲಕ್ಷ ರೂ. ನಗದು ಕಳವು ಮಾಡಲಾಗಿತ್ತು. ಅದೇ ದಿನ ಎ.ಆರ್.ಕನ್ಸಲಿಂಗ್ ಎಂಬ ಅಂಗಡಿಯ ಮುಂದೆ ನಿಲ್ಲಿಸಿದ್ದ ಕೆಎ-12:ಎಲ್-3385 ದ್ವಿಚಕ್ರ ವಾಹನ ಕಳವಾಗಿತ್ತು. ಈ ಕುರಿತು ಶುಂಠಿಕೊಪ್ಪ ಪೊಲೀಸ್ ಠಾಣೆಯಲ್ಲಿ ಎರಡು ಪ್ರತ್ಯೇಕ ಪ್ರಕರಣ ದಾಖಲಾಗಿದ್ದು,ಪ್ರಕರಣದ ತನಿಖೆಗಾಗಿ ರಚಿಸಲಾಗಿದ್ದ ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ ಕೆ.ರಾಜೇಶ್, ಪಿಎಸ್ಐಗಳಾದ ಎಂ.ಸಿ.ಶ್ರೀಧರ್, ನಾಗರಾಜು ಹಾಗೂ ಸಿಬ್ಬಂದಿಗಳ ವಿಶೇಷ ತಂಡ ಆರೋಪಿಯನ್ನು ಬಂಧಿಸಿದೆ. ಬಂಧಿತನಿಂದ 15 ಸಾವಿರ ರೂ.ನಗದು, ವಾಚ್ ಮತ್ತು ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇನ್ನೋರ್ವ ಆರೋಪಿ ಪುತ್ತೂರು ಪೊಲೀಸರಿಂದ ಬಂಧನ:
ಶುಂಟಿಕೊಪ್ಪದಲ್ಲಿ ನಡೆದ 2 ಕಳವು ಪ್ರಕರಣಗಳ ಮತ್ತೊಬ್ಬ ಆರೋಪಿ ಇಜಾಜ್ ಎಂಬಾತನನ್ನು, ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಾದ ಕಳವು ಪ್ರಕರಣದಲ್ಲಿ ಈಗಾಗಲೇ ದಸ್ತಗಿರಿ ಮಾಡಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ತಿಳಿಸಿದ್ದಾರೆ. ಪ್ರಕರಣದ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಶ್ರಮಿಸಿದ ಸಿಬ್ಬಂದಿಗಳನ್ನು ಪ್ರಶಂಸಿಸಿರುವ ಎಸ್.ಪಿ.ಯವರು, ಸಾರ್ವಜನಿಕ ಸ್ಥಳಗಳಲ್ಲಿ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ತುರ್ತು ಸಹಾಯವಾಣಿ 112ಕ್ಕೆ ಕರೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಿದ್ದಾರೆ.