ವಿಟ್ಲ: ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ ತಂತ್ರಿಯವರ ನೇತೃತ್ವದಲ್ಲಿ ಜ.17 ರಿಂದ ಜ.19ರವರೆಗೆ ನಡೆಯಲಿರುವ ವರ್ಷಾವಧಿ ಜಾತ್ರೋತ್ಸವದ ಅಂಗವಾಗಿ ಜ.16 ರಂದು ಬೆಳಿಗ್ಗೆ ಉಗ್ರಾಣ ಮುಹೂರ್ತ ನಡೆಯಿತು.
ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಸುರೇಶ್ ಕೆ.ಎಸ್. ಮುಕ್ಕುಡ, ಸದಸ್ಯರಾದ ಪ್ರಕಾಶ್ ಕೆ.ಎಸ್.ಉರಿಮಜಲು, ವಿಜಯಕುಮಾರ್ ಗೌಡ ಸೂರ್ಯ, ಚಂದ್ರಶೇಖರ ಕಂಬಳಿ ಅರ್ಕೆಚ್ಚಾರು, ದೇಜಪ್ಪ ಕೋಲ್ಪೆ, ವಿ.ಕೆ.ಕುಟ್ಟಿ ಉರಿಮಜಲು, ಉಷ ಮುಂಡ್ರಬೈಲು, ಶಶಿಪ್ರಭ ಮಿತ್ತೂರು, ರಾಜಾರಾಮ ಶೆಟ್ಟಿ ಕೋಲ್ಪೆಗುತ್ತು, ಇಡ್ಕಿದು ಗ್ರಾ.ಪಂ ಸದಸ್ಯ ಪುರುಷೋತ್ತಮ ಕೋಲ್ಪೆ ಸಹಿತ ಗ್ರಾಮಸ್ಥರು ಉಪಸ್ಥಿತರಿದ್ದರು. ದೇವಾಲಯದ ಪ್ರಧಾನ ಅರ್ಚಕರಾದ ಗೋವಿಂದ ಜೋಯಿಷರವರು ವಿಧಿ ವಿಧಾನವನ್ನು ನೆರವೇರಿಸಿದರು.
ಜಾತ್ರೋತ್ಸವದ ಪ್ರಯುಕ್ತ ಜ 17 ಆದಿತ್ಯವಾರದಂದು ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ ವಿವಿಧ ಭಜನಾ ಮಂಡಳಿಗಳಿಂದ ಅರ್ಧ ಏಕಾಹ ಭಜನಾ ಕಾರ್ಯಕ್ರಮ ನಡೆಯಲಿದೆ. ಬೆಳಿಗ್ಗೆ 108 ತೆಂಗಿನಕಾಯಿ ಗಣಪತಿ ಹವನ ನಡೆದು ಮಧ್ಯಾಹ್ನ ಪೂರ್ಣಾಹುತಿಯಾಗಿ, ಮಹಾಪೂಜೆ ನಡೆದು ಬಳಿಕ ಅನ್ನಸಂತರ್ಪಣೆ ನಡೆಯಲಿದೆ
ಅದೇ ದಿನ ಸಂಜೆ 7 ರಿಂದ ಶಾಂಭವಿ ವಿಜಯ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮ ನಡೆಯಲಿದೆ.
ಜ. 18 ರ ಬೆಳಿಗ್ಗೆ ಆಶ್ಲೇಷ ಬಲಿ ನಡೆಯಲಿದೆ. ಪೂರ್ವಾಹ್ನ 11ಕ್ಕೆ ತುಲಾಭಾರ ಸೇವೆ ನಡೆಯಲಿದ್ದು, ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ. ಅದೇ ದಿನ ರಾತ್ರಿ ಪಂಚಮಿ ಬಲಿ ಉತ್ಸವ ಹಾಗೂ ವಸಂತ ಕಟ್ಟೆ ಪೂಜೆ ನಡೆಯಲಿದೆ.
ಜ. 19 ರ ಬೆಳಿಗ್ಗೆ ದೇವರ ಬಲಿ ಹೊರಟು ದರ್ಶನ ಬಲಿ, ಬಟ್ಟಲು ಕಾಣಿಕೆ, ಶ್ರೀ ಗಂಧ ಪ್ರಸಾದ ಮತ್ತು ಪಿಲಿಚಾಮುಂಡಿ ದೈವದ ನೇಮೋತ್ಸವ ನಡೆದು ಮಹಾಪೂಜೆಯ ಬಳಿಕ ಅನ್ನಸಂತರ್ಪಣೆ ನಡೆಯಲಿದೆ.
ಭಕ್ತಾಧಿಗಳೆಲ್ಲರೂ ಆಗಮಿಸಿ ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ, ಶ್ರೀ ದೇವರ ಕೃಪೆಗೆ ಪಾತ್ರರಾಗಬೇಕಾಗಿ ಕೋಲ್ಪೆ ಶ್ರೀ ಷಣ್ಮುಖ ಸುಬ್ರಹ್ಮಣ್ಯ ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ. 19ರಂದು ನಡೆಯುವ ಕಾರ್ಯಕ್ರಮದ ನೇರ ಪ್ರಸಾರವು ನಿಮ್ಮ ನೆಚ್ಚಿನ ವಿಟಿವಿ ಯಲ್ಲಿ ಪ್ರಸಾರವಾಗಲಿದೆ.