ಮೈಸೂರು: ಮೃತ ಕೊರೊನಾ ವಾರಿಯರ್ಗಳನ್ನ ಹುತಾತ್ಮರೆಂದು ಕರೆಯಬೇಕು, ಹುತಾತ್ಮ ಯೋಧರಿಗೆ ಸಿಗುವ ಸೌಲಭ್ಯಗಳು ಅವರ ಕುಟುಂಬಗಳಿಗೂ ಸಿಗಬೇಕು ಎಂದು ಜಯದೇವ ಹೃದ್ರೋಗ ಆಸ್ಪತ್ರೆ ನಿರ್ದೆಶಕ ಡಾ.ಮಂಜುನಾಥ್ ಹೇಳಿದ್ದಾರೆ.
ಇಂದು ನಾಡಹಬ್ಬ ದಸರಾ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರದ ವಿರುದ್ಧ ಹೋದರೆ ಏನಾಗುತ್ತೆ ಅನ್ನೋದಕ್ಕೆ ಕೊರೊನಾ ಸಾಕ್ಷಿ. ಮಾಡಬಾರದನ್ನು ಮಾಡಿದರೆ ಆಗಬಾರದು ಆಗುತ್ತೆ ಅನ್ನೋದನ್ನ ಈ ಬೆಳವಣಿಗೆಯಿಂದ ತಿಳಿಯಬೇಕು ಎಂದರು. ಕೊರೊನಾ ನಿಯಂತ್ರಣಕ್ಕೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸಿಎಂ ಬಿಎಸ್ಯಡಿಯೂರಪ್ಪ ಸ್ಪಂದಿಸಿದ್ದಾರೆ. ರಾಜ್ಯ ಸರ್ಕಾರ ಮುತುವರ್ಜಿಯಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ಸೌಲಭ್ಯಗಳು ಲಭ್ಯವಾಗುವಂತೆ ಮಾಡಿದೆ. ಸರ್ಕಾರದ ಜೊತೆ ಸಾರ್ವಜನಿಕರು ಕೈಜೋಡಿಸಿದ್ರೆ ಆದಷ್ಟು ಬೇಗ ಕೊರೊನಾ ನಿಯಂತ್ರಣಕ್ಕೆ ಬರುತ್ತದೆ ಎಂದು ಹೇಳಿದರು.
ವೈದ್ಯರ ಸದ್ಯದ ಪರಿಸ್ಥಿತಿ ವಿವರಿಸಿದ ಮಂಜುನಾಥ್, ವೈದ್ಯಕೀಯ ಕ್ಷೇತ್ರ ರಣರಂಗವಾಗುತ್ತಿದೆ. ವೈದ್ಯರು ರೋಗಿಗಳಾಗುತ್ತಿದ್ದಾರೆ. ಗುಣಮಟ್ಟದ ಚಿಕಿತ್ಸೆ ನೀಡಿದರೂ ವೈದ್ಯರ ಮೇಲೆ ಹಲ್ಲೆ ನಡೆಸುತ್ತಾರೆ. ಇದರಿಂದ ವೈದ್ಯರ ಆತ್ಮವಿಶ್ವಾಸ ಕುಗ್ಗುತ್ತದೆ. ಈ ಆತಂಕದಿಂದಲೇ ಗ್ರಾಮೀಣ ಪ್ರದೇಶಗಳಿಗೆ ವೈದ್ಯರು ಹೋಗುತ್ತಿಲ್ಲ ಎಂದರು. ಆದಷ್ಟು ಬೇಗ ಮಹಾಮಾರಿ ಕೊರೊನಾಗೆ ಲಸಿಕೆ ಸಿಗಲಿ. ಜಲಪ್ರಳಯದಿಂದ ಜನತೆ ಪಾರಾಗಲಿ ಎಂದು ಚಾಮುಂಡೇಶ್ವರಿಯಲ್ಲಿ ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.