ಉಡುಪಿ: ಕಾರೊಂದು ಡಿಕ್ಕಿಯಾಗಿ ಸ್ಕೂಟರ್’ನಲ್ಲಿದ್ದ ಇಬ್ಬರು ಯುವತಿಯರು ಮೃತಪಟ್ಟ ಘಟನೆ ಕೋಟದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ. ಕೋಟದ ಕೃಷ್ಣಭವನ ಹೋಟೆಲ್ ಬಳಿ ಶನಿವಾರ ಈ ದುರಂತ ನಡೆದಿದೆ. ಸ್ಕೂಟರ್ ಚಲಾಯಿಸುತ್ತಿದ್ದ ಬೇಳೂರು ನಿವಾಸಿ ಶ್ರೇಯಾ ಶಾನಭಾಗ್ (24), ಆಕೆಯ ಸ್ನೇಹಿತೆ ಉಜಿರೆ ಮೂಲದ ಕುಂದಾಪುರ ಕೋಡಿಯ ಪ್ರಜ್ಞಾ (25) ಮೃತರು.
ಕುಂದಾಪುರ ಕಡೆಯಿಂದ ಉಡುಪಿ ಕಡೆ ಸಾಗುತ್ತಿದ್ದ ಸ್ಕೂಟರ್ ಗೆ ಹಿಂದಿನಿಂದ ಬಂದ ಫಾರ್ಚುನರ್ ಕಾರು ಡಿಕ್ಕಿಯಾಗಿದೆ. ಇದರಿಂದ ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡ ಶ್ರೇಯಾ ಉಡುಪಿ ಆಸ್ಪತ್ರೆಯಲ್ಲಿ ಮೃತಪಟ್ಟರು. ಗಂಭೀರ ಗಾಯಗೊಂಡ ಪ್ರಜ್ಞಾ ಮಣಿಪಾಲ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅಪಘಾತ ನಡೆಸಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ ಕಾರನ್ನು ಸ್ಥಳೀಯರು ಪೊಲೀಸರಿಗೆ ಒಪ್ಪಿಸಿದ್ದಾರೆ. ಕೋಟ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಅಪಘಾತ ಎಸಗಿದ ಕಾರು ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದು, ಕೋಟದ ಜೀವನ್ ಮಿತ್ರ ಆ್ಯಂಬುಲೆನ್ಸ್ ಮಾಲಿಕ ನಾಗರಾಜ್ ಪುತ್ರನ್ ಅವರ ಸಮಯ ಪ್ರಜ್ಞೆಯಿಂದ ಸಾಸ್ತಾನ ಟೋಲ್ ಬಳಿ ವಾಹನ ತಡೆದು ಕೋಟ ಪೊಲೀಸ್ ಠಾಣೆಗೆ ಒಪ್ಪಿಸಲಾಯಿತು. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.