ಮಂಗಳೂರು: ರಾಜ್ಯದ 34ಸಾವಿರ ದೇವಸ್ಥಾನಗಳ ಪೈಕಿ 89 ಎ ದರ್ಜೆಯ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗೆ ಅರ್ಜಿ ಸ್ವೀಕರಿಸಿ ನಿಯಮಾನುಸಾರ ಪೊಲೀಸ್ ಇಲಾಖೆಯ ಪರಿಶೀಲನೆ ಸೇರಿದಂತೆ ಇನ್ನಿತರ ತಾಂತ್ರಿಕ ಕಾರ್ಯಗಳು ನಡೆಯುತ್ತಿದೆ. ವಾರದೊಳಗೆ ವ್ಯವಸ್ಥಾಪನಾ ಸಮಿತಿಗೆ ಅನುಮೋದನೆ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಮಾಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು. ರಾಜ್ಯದಲ್ಲಿ ಅವಧಿ ಮುಗಿದ ದೇವಸ್ಥಾನಗಳ ವ್ಯವಸ್ಥಾಪನಾ ಸಮಿತಿಗಳಿಗೆ ಆಯ್ಕೆಗೆ ಮುಜರಾಯಿ ಇಲಾಖೆಯಿಂದ ಹಂತ ಹಂತವಾಗಿ ಅರ್ಜಿ ಸ್ವೀಕರಿಸಲಾಗುವುದು. ರಾಜ್ಯ ಸರ್ಕಾರದ ಸಾಮೂಹಿಕ ವಿವಾಹದ ಸಪ್ತಪದಿ ಯೋಜನೆಯನ್ನು ಕೊರೋನಾ ರೋಗ ಹಾವಳಿಯಿಂದಾಗಿ ಮುಂದೂಡಲಾಗಿದೆ. ಕೊರೊನಾ ಮಾರ್ಗ ಸೂಚಿಗಳನ್ನು ಅನುಸರಿಸಿಕೊಂಡು ಯೋಜನೆ ಮತ್ತೆ ಅನುಷ್ಟಾನಿಸಲು ಚಿಂತಿಸಲಾಗಿದೆ.
ಕೊರೋನಾ ಖಾಯಿಲೆ ಬೆಂಗಳೂರಿನ ಬಳಿಕ ಮಂಗಳೂರು ಕಠಿಣ ಪರಿಸ್ಥಿತಿಯಲ್ಲಿ ಇತ್ತು. ರಾಜ್ಯದ ಮುಖ್ಯಮಂತ್ರಿಗಳ ವಿಶೇಷ ಕಾಳಜಿ, ಈ ಭಾಗದ ಜನಪ್ರತಿನಿಧಿಗಳು, ಅಧಿಕಾರಿ ವರ್ಗ , ವೈದ್ಯರ ನಿರಂತರ ಶ್ರಮದಿಂದಾಗಿ ಸಾರ್ವಜನಿಕರ ಸಹಕಾರದಿಂದ ಬಹುತೇಕ ಹತೋಟಿಗೆ ಬಂದಿದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೆಚ್ಚಿನ ವ್ಯವಸ್ಥೆ ಕಲ್ಪಿಸಲಾಗಿದೆ. ರೋಗಿಗಳಿಗೆ ಸಕಾಲಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಇದರಲ್ಲಿ ಯಾವುದೇ ಗೊಂದಲವಿಲ್ಲ. ಜನರು ಕೋವಿಡ್ ಖಾಯಿಲೆಯ ಬಗ್ಗೆ ಭಯ ಭೀತರಾಗುವ ಬದಲು ಜಾಗೃತೆ ವಹಿಸಬೇಕು ಎಂದರು.