ಉಡುಪಿ: ಸ್ವಾತಂತ್ರ್ಯ ಭಾರತದ ಅಮೃತ ಮಹೋತ್ಸವ ಹಿನ್ನೆಲೆ ಬ್ರಹ್ಮಗಿರಿ ಸರ್ಕಲ್ನಲ್ಲಿ ಹಿಂದೂ ಮಹಾಸಭಾ ಮುಖಂಡರು ವೀರ್ ಸಾವರ್ಕರ್ರ ಭಾವಚಿತ್ರವಿರುವ ಫ್ಲೆಕ್ಸ್ ಅಳವಡಿಸಿದ್ದು, ಇದಕ್ಕೆ ಪಿಎಫ್ಐ ಸಂಘಟನೆ ವಿರೋಧ ವ್ಯಕ್ತಪಡಿಸಿದೆ. ಈ ಫ್ಲೆಕ್ಸ್ ಅನ್ನು ತೆರವು ಮಾಡುವಂತೆ ಪೊಲೀಸರಿಗೆ ಮನವಿ ಸಲ್ಲಿಸಿದೆ.
ಶಿವಮೊಗ್ಗದಲ್ಲಿ ಸಾರ್ವಕರ್ ಭಾವಚಿತ್ರವುಳ್ಳ ಫ್ಲೆಕ್ಸ್ ತೆರವು ಸಂಬಂಧ ನಡೆದ ಗಲಾಟೆಯಲ್ಲಿ ಪ್ರೇಮ್ ಸಿಂಗ್ ಎಂಬಾತನಿಗೆ ಕಿಡಿಗೇಡಿಗಳು ಚಾಕು ಇರಿದಿರುವ ಪ್ರಕರಣ ಬಿಗುವಿನ ವಾತಾವರಣ ನಿರ್ಮಿಸಿದೆ. ಇದರ ಬೆನ್ನಲ್ಲೇ ತುಮಕೂರು ನಗರದ ಎಂಪ್ರೆಸ್ ಕಾಲೇಜು ಬಳಿಯೂ ಸಾರ್ವಕರ್ ಭಾವಚಿತ್ರವಿದ್ದ ಫ್ಲೆಕ್ಸ್ ಅನ್ನು ಕಿಡಿಗೇಡಿಗಳು ಹರಿದು ಹಾಕಿದ್ದಾರೆ. ಇಷ್ಟೆಲ್ಲಾ ಬೆಳವಣಿಗೆ ಬಳಿಕ ಉಡುಪಿಯಲ್ಲೂ ವಿವಾದ ಶುರುವಾಗಿದೆ. ಹೀಗಾಗಿ ಉಡುಪಿಯಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಉಡುಪಿ ನಗರಸಭೆಯ ಅನುಮತಿ ಪಡೆದು ಫ್ಲೆಕ್ಸ್ ಅಳವಡಿಸಲಾಗಿದ್ದು, ಇದನ್ನು ತೆರವು ಮಾಡಲು 10 ದಿನಗಳ ಕಾಲಾವಕಾಶವಿದೆ. ಹೀಗಾಗಿ ಪೊಲೀಸರು ಈ ಪ್ರದೇಶದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಭದ್ರತೆ ಒದಗಿಸಿದ್ದಾರೆ.