


ಮಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ (ಕೆಎಸ್ಸಾರ್ಟಿಸಿ) ಐಶಾರಾಮಿ ಬಸ್ಗಳ ಸಾಲಿಗೆ ‘ಪಲ್ಲಕ್ಕಿ’ ಉತ್ಸವ ಹೆಸರಿನ ಸ್ಲೀಪರ್ ಬಸ್ಗಳು ಸೇರ್ಪಡೆಯಾಗಿದ್ದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 12 ಬಸ್ಗಳು ವಿವಿಧ ಜಿಲ್ಲೆಗಳಿಗೆ ಸಂಚರಿಸಲಿವೆ.
3ಐರಾವತ, ಅಂಬಾರಿ ರೀತಿಯಲ್ಲೇ ಅತ್ಯಾಧುನಿಕ ವ್ಯವಸ್ಥೆಗಳನ್ನು ಹೊಂದಿರುವ ‘ಪಲ್ಲಕ್ಕಿ ಉತ್ಸವ ಬಸ್ಗಳಿಗೆ ಅಕ್ಟೋಬರ್ 7ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಚಾಲನೆ ನೀಡಿದ್ದರು. ಕೆಎಸ್ಆರ್ಟಿಸಿ 40 ಬಸ್ಗಳನ್ನು ರಸ್ತೆಗಿಳಿಸಲು ನಿರ್ಧರಿಸಿದ್ದು, ಇದರಲ್ಲಿ ಮಂಗಳೂರು ವಿಭಾಗಕ್ಕೆ 8 ಮತ್ತು ಪುತ್ತೂರು ವಿಭಾಗಕ್ಕೆ 4 ಬಸ್ಗಳು ಬರಲಿದ್ದು ಹೆಚ್ಚಿನವು ಬೆಂಗಳೂರಿಗೆ ಪ್ರಯಾಣಿಸಲಿವೆ.
ಪುತ್ತೂರು ಮತ್ತು ಧರ್ಮಸ್ಥಳ ಡಿಪೋಗಳಿಗೆ ತಲಾ 2ರಂತೆ ಬಸ್ ಗಳನ್ನು ನೀಡಲಾಗಿದ್ದು ಪುತ್ತೂರು, ಧರ್ಮಸ್ಥಳ ಮತ್ತು ಬೆಳ್ತಂಗಡಿಯಿಂದ ಬೆಂಗಳೂರಿಗೆ ರಾತ್ರಿ ಸಂಚಾರ ನಡೆಸಲಿವೆ ಎಂದು ಪುತ್ತೂರು ವಿಭಾಗೀಯ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ತಿಳಿಸಿದ್ದಾರೆ. ಇದಲ್ಲದೆ, 9 ಹೊಸ ಸಾಮಾನ್ಯ ಸಾರಿಗೆಯ ಕೆಂಪು ಬಸ್ಗಳು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ವಿಭಾಗಕ್ಕೆ ಬರಲಿದ್ದು ಇದರಲ್ಲಿ ಪುತ್ತೂರು, ಬಿ.ಸಿ.ರೋಡ್, ಧರ್ಮಸ್ಥಳ ಮತ್ತು ಮಡಿಕೇರಿ ಡಿಪೋಗಳಿಗೆ ತಲಾ 2 ಮತ್ತು ಸುಳ್ಯಕ್ಕೆ 1 ಬಸ್ ನೀಡಲು ನಿರ್ಧರಿಸಲಾಗಿದೆ. ಮಹಿಳೆಯರಿಗೆ ಉಚಿತ ಯೋಜನೆ ಬಂದ ಬಳಿಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಚ್ಚುವರಿ ಸರ್ಕಾರಿ ಬಸ್ ಗಳನ್ನು ಇಳಿಸಲು ಒತ್ತಾಯ ಕೇಳಿಬಂದಿತ್ತು.
ಪಲ್ಲಕ್ಕಿ ನಾನ್ ಎ.ಸಿ. ಸ್ಲೀಪರ್ ಬಸ್ ಆಗಿದ್ದು, 30 ಸ್ಲೀಪರ್ ಬರ್ತ್ ಹೊಂದಿದೆ. ಪ್ರತೀ ಸ್ಲೀಪರ್ ನಲ್ಲಿ ಮೊಬೈಲ್ ಹೋಲ್ಡರ್, ಮೊಬೈಲ್ ಚಾರ್ಜರ್,
ಪಾದರಕ್ಷೆ ಇಡುವ ವ್ಯವಸ್ಥೆ ಹೊಂದಿದೆ. ಎಮೆರ್ಜೆನಿ ಅಲರ್ಟ್ ವ್ಯವಸ್ಥೆ ಇದೆ. ಆಡಿಯೋ ಮೂಲಕ ಪ್ರಯಾಣಿಕರಿಗೆ ಮಾಹಿತಿ ನೀಡುವ ಮತ್ತು
ಪ್ರಯಾಣಿಕರಿಂದ ಮಾಹಿತಿ ಪಡೆಯುವ ಸೌಕರ್ಯವಿದೆ. ಸೀಟ್ ನಂಬರ್ ಮೇಲೆ ಎಲ್ಇಡಿ ಬೆಳಕು, ಡಿಜಿಟಲ್ ಗಡಿಯಾರ, ಎಲ್ಇಡಿ
ಫ್ಲೋರ್ ಮುಂತಾದ ಸವಲತ್ತುಗಳಿವೆ. ಚಾಲಕನಿಗೆ ನೆರವಾಗುವ ಅತ್ಯಾಧುನಿಕ ಬ್ಯಾಕ್ ಕ್ಯಾಮೆರಾವೂ ಇದೆ.
ಕೆಎಸ್ಆರ್ಟಿಸಿ ರಾಜ್ಯದಲ್ಲಿ 40 ಪಲ್ಲಕ್ಕಿ ಉತ್ಸವ ಬಸ್ಗಳನ್ನು ಖರೀದಿ ಮಾಡಿದೆ. ಈ ಪೈಕಿ ಒಟ್ಟು 12ಕ್ಕೂ ಅಧಿಕ ಮಾರ್ಗಗಳಲ್ಲಿ ಈ ಬಸ್ಗಳು ಸಂಚಾರ ನಡೆಸಲಿವೆ. ಪ್ರಮುಖವಾಗಿ ಬೆಂಗಳೂರಿನಿಂದ ಮಂಗಳೂರು, ಉತ್ತರ ಕನ್ನಡ, ಹೊಸಪೇಟೆ, ಬೆಳಗಾವಿ, ಮಂತ್ರಾಲಯ, ಶಿವಮೊಗ್ಗ ಮಾರ್ಗದಲ್ಲಿ ಸಂಚರಿಸಲಿವೆ. ಮಂಗಳೂರಿನಿಂದ ಮಂತ್ರಾಲಯ, ಬೆಂಗಳೂರಿಗೆ, ದಾವಣಗೆರೆಯಿಂದ ಮಂಗಳೂರು, ಕಲಬುರಗಿಗೆ ಈ ಪಲ್ಲಕ್ಕಿ ಉತ್ಸವ ಬಸ್ ಗಳ ಸೌಲಭ್ಯ ನೀಡಲಾಗಿದೆ.








