ಬಂಟ್ವಾಳ: ಮಕ್ಕಳ ಕಲಾ ಲೋಕ ಕನ್ನಡ ಸಾಹಿತ್ಯ ಪರಿಷತ್ತು ಬಂಟ್ವಾಳ ಘಟಕವು ನಿರ್ವಹಿಸುವ ಬಂಟ್ವಾಳ ತಾಲೂಕು 17ನೇಯ ಮಕ್ಕಳ ಸಾಹಿತ್ಯ ಸಮ್ಮೇಳನ ಕಡೇಶಿವಾಲಯ ದ.ಕ.ಜಿ.ಪ ಹಿರಿಯ ಪ್ರಾಥಮಿಕ ಶಾಲೆಯ ಸಹಭಾಗಿತ್ವದಲ್ಲಿ ದಿನಾಂಕ 06.12.2023 ರಂದು ನಡೆಯಲಿದೆ.
ಸಮ್ಮೇಳನದಲ್ಲಿ ತಾಲೂಕಿನ 18ವರ್ಷ ಪ್ರಾಯಕ್ಕಿಂತ ಕೆಳಗಿನ ಮಕ್ಕಳು ಭಾಗವಹಿಸಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾಗಿ ಕಡೇಶಿವಾಲಯ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿನಿಯಾಗಿರುವ ಕುಮಾರಿ ಸಾನ್ವಿ ಸುವರ್ಣ ಆಯ್ಕೆಯಾಗಿರುತ್ತಾರೆ ಎಂದು ‘ಮಕ್ಕಳ ಕಲಾ ಲೋಕ’ ದ ಅಧ್ಯಕ್ಷರಾದ ರಮೇಶ ಎಂ. ಬಾಯಾರು ತಿಳಿಸಿದ್ದಾರೆ. ಸಾನ್ವಿಯವರು ಸುಂದರ ಪೂಜಾರಿ ವಿಶಾಲಾಕ್ಷಿ ದಂಪತಿ ಪುತ್ರಿ.
ಕಲಿಕೆಯಲ್ಲಿ ಉತ್ತಮ ಸಾಧನೆ ತೋರುತ್ತಿರುವ ಬಾಲ ಪ್ರತಿಭೆ. ಎಳೆಯ ವಯಸ್ಸಿನಲ್ಲಿಯೇ ವಿವಿಧ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿ ಕೊಂಡಿರುವ ಇವರು ಭಾರತ ಸರಕಾರದ ಶಿಕ್ಷಣ ಸಚಿವಾಲಯದಿಂದ “ವೀರಗಾಥಾ” ಪ್ರಮಾಣ ಪತ್ರ ಪಡೆದಿರುವರು. ಸಶಸ್ತ್ರ ಪಡೆಗಳ ಶೂರರ ಸ್ಮರಣಾರ್ಥವಾಗಿ ಈ ಪ್ರಮಾಣ ಪತ್ರ ನೀಡಲಾಗಿದೆ. ಭಾರತೀಯ ಜೀವ ವಿಮಾ ನಿಗಮವು ನೀಡುವ ಸಾಧನಾ ಪ್ರಶಸ್ತಿಯನ್ನು ಪಡೆದ ಈಕೆ ಉತ್ತಮ ಮಾತುಗಾರರು. ಸ್ಪರ್ಧಾತ್ಮ ಪರೀಕ್ಷೆಗಳಿಗೆ ತಯಾರಿ, ಫೊಟೋಗ್ರಫಿ, ನೃತ್ಯ, ಬರವಣಿಗೆ, ಚಿತ್ರ ಕಲೆ ಇವರ ಹವ್ಯಾಸ ಎಂದು ಕಡೇಶಿವಾಲಯ ಶಾಲಾ ಮುಖ್ಯೋಪಾಧ್ಯಾಯ ಬಾಬು ಪೂಜಾರಿ ಕೆ. ತಿಳಿಸಿರುತ್ತಾರೆ.