Monday, May 20, 2024
spot_imgspot_img
spot_imgspot_img

ಕುಂದಾಪುರ: ಲಾಡ್ಜ್‌ನಲ್ಲಿ ತಂಗಿದ್ದ ವೇಳೆ ಲಕ್ಷಾಂತರ ರೂ.ಮೌಲ್ಯದ ಚಿನ್ನಾಭರಣಗಳನ್ನು ಕದ್ದು ಪರಾರಿಯಾದ ಸ್ನೇಹಿತ

- Advertisement -G L Acharya panikkar
- Advertisement -

ಕುಂದಾಪುರ: ಲಾಡ್ಜ್ ನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರ ಬಳಿ ಇದ್ದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣಗಳನ್ನು ಸ್ನೇಹಿತನೇ ಕದ್ದು ಪರಾರಿಯಾಗಿರುವ ಘಟನೆ ಕುಂದಾಪುರದಲ್ಲಿ ನಡೆದಿದೆ.

ಮುಹಮ್ಮದ್ ಶಾಹಬುದ್ದಿನ್ ಮಾಲಕತ್ವದ ಹಾಜಿ ಗೋಲ್ಡ್ ಆ್ಯಂಡ್ ಡೈಮಂಡ್ ಎಂಬ ಜ್ಯುವೆಲ್ಲರಿ ಹೋಲ್ ಸೇಲ್ಸ್ ಮಾರಾಟ ಅಂಗಡಿಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ಆಗಿರುವ ರಾಜಸ್ಥಾನ ಮೂಲದ ಪ್ರಸ್ತುತ ಮಂಗಳೂರು ಅತ್ತಾವರ ಕಾಪ್ರಿಗುಡ್ಡೆ ನಿವಾಸಿ ರಮೇಶ್ ಕುಮಾರ್ ಎಂಬವರು ಚಿನ್ನಾಭರಣ ಮಾರಾಟಕ್ಕಾಗಿ ಜೂ.10ರಂದು ತನ್ನ ಸ್ನೇಹಿತ ರಾಜಸ್ಥಾನದ ಪಾಲಿ ಜಿಲ್ಲೆಯ ರಾಮ್ ಎಂಬಾತನ ಜೊತೆ ಕುಂದಾಪುರಕ್ಕೆ ಹೊರಟಿದ್ದರು. ಸಂಜೆ ಉಪ್ಪುಂದದ ಅಶೋಕ್ ಜ್ಯುವೆಲ್ಲರಿಗೆ ಹೋಗಿ ಚಿನ್ನಾಭರಣ ಮಾರಾಟ ಮಾಡಿ ಅಲ್ಲಿಂದ ವಾಪಸು ಮಂಗಳೂರಿಗೆ ಹೊರಟಿದ್ದು, ಕುಂದಾಪುರ ತಲುಪುವಾಗ ಸಂಜೆ 7 ಆಗಿರುವುದರಿಂದ ಇವರಿಬ್ಬರು ಕುಂದಾಪುರದ ಹೊಟೇಲ್ ನಲ್ಲಿ ರೂಮ್ ಮಾಡಿ ಉಳಿದುಕೊಂಡರು.

ಜೂ.11 ರಂದು ಬೆಳಗ್ಗಿನ ಜಾವ 3 ಗಂಟೆಗೆ ರಮೇಶ್ ಕುಮಾರ್ ನೀರು ಕುಡಿಯಲು ಎದ್ದಾಗ ಜೊತೆಗಿದ್ದ ರಾಮ್ ಚಿನ್ನಾಭರಣ ಇದ್ದ ಬ್ಯಾಗ್ ನೊಂದಿಗೆ ಪರಾರಿಯಾಗಿರುವುದು ಕಂಡುಬಂತು. 43 ಜೊತೆ ಚಿನ್ನದ ಸಾನಿಯಾ ಬಾಲಿ, 153 ಫೀಸ್ ಚಿನ್ನದ ಮೂಗುತಿ, 44 ಫೀಸ್ ಚಿನ್ನದ ಜೆ ಬಾಲಿ, 158 ಜೊತೆ ಚಿನ್ನದ ಕಿವಿಯೋಲೆ, 60 ಜೊತೆ ಕಿವಿಯ ಚಿನ್ನದ ಟಾಪ್ಸ್, 14 ಗ್ರಾಂ ಚಿನ್ನದ ಗಟ್ಟಿಗಳನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ದೂರಲಾಗಿದೆ. ಕಳವಾದ ಚಿನ್ನಾಭರಣಗಳ ಒಟ್ಟು ಮೌಲ್ಯ 22,56,000ರೂ. ಎಂದು ಅಂದಾಜಿಸಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.

- Advertisement -

Related news

error: Content is protected !!