ಕುಂದಾಪುರ: ಕುಂದಾಪುರದ ಜುವೆಲ್ಲರಿ ಸಂಸ್ಥೆಯೊಂದು ಚಿನ್ನಾಭರಣ ಹಾಗೂ ನಗದು ಹೂಡಿಕೆ ಹೆಸರಿನಲ್ಲಿ ಹಲವು ಮಂದಿ ಗ್ರಾಹಕರಿಗೆ ಲಕ್ಷಾಂತರ ರೂ. ವಂಚನೆ ಎಸಗಿದ್ದಾರೆನ್ನಲಾದ ಘಟನೆ ನಡೆದಿದೆ.
ಈ ಬಗ್ಗೆ ಗ್ರಾಹಕರಾದ ಕುಂದಾಪುರದ ಇರ್ಷಾದ್ ಗುಲ್ಜಾರ್ ನೀಡಿದ ದೂರಿನಂತೆ ಆರೋಪಿಗಳಾದ ಕಂಡ್ಲೂರಿನ ಮುಹಮ್ಮದ್ ಇಫ್ತಿಕಾರ್ ಜುಮ್ಮಿ, ಭಟ್ಕಳದ ಮೊಮಿನ್ ಯುಸುಫ್ ಅಲಿ, ಮೊಳಹಳ್ಳಿಯ ಗಣೇಶ್ ಶೆಟ್ಟಿ, ಭಟ್ಕಳದ ಖತಿಬ್ ಅಬ್ದುಲ್ ರಹಿಮಾನ್, ಬಿ.ಎಂ.ಜಾಫರ್, ಫರಾಜ್, ಆಸೀಫ್ ಕೆ., ನಜೀರ್ ಅಹ್ಮದ್,
ಮುಹಮ್ಮದ್ ಮುಶ್ರಫ್, ಮುಹಮ್ಮದ್ ಆಸೀಫ್, ಮುಹಮ್ಮದ್ ನೂರೈಸ್, ಶಎ.ಜೀನತ್, ಬಾಷಾ, ಅಕ್ಬರ್, ಬಶೀರ್ ಅಹ್ಮದ್, ಮುನೀರ್, ಅರ್ಫಾದ್, ಮುಹಮದ್ ಫಾಮೀಝಾ, ಸರ್ದಾರ್ ನವೀದ್ ಅಕ್ತರ್, ನೌಶಾದ್, ಮುಹಮ್ಮದ್ ಪಾರೀಸ್, ಬಿ.ಬಾನು, ನಸೀಮಾ, ವಾಹೀದಾ ಎಂಬವರ ವಿರುದ್ಧ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂದಾಪುರದ ಗೋಲ್ಡ್ ಜುವೆಲ್ಲರ್ಸ್ ಸಂಸ್ಥೆಯವರು ನಗದು ಮತ್ತು ಚಿನ್ನಾಭರಣ ಸ್ಕೀಮ್ ಮೂಲಕ 1ಲಕ್ಷ ರೂ. ಚಿನ್ನಾಭರಣ ಹೂಡಿಕೆ ಮಾಡಿದರೆ ತಿಂಗಳಿಗೆ ಚಿನ್ನದ ಮಾರುಕಟ್ಟೆ ದರದ ಮೇಲೆ 2000ರೂ.ಯಿಂದ 2500ರೂ. ವರೆಗೆ ಹಾಗೂ ಒಂದು ಲಕ್ಷ ರೂ. ಹೂಡಿಕೆ ಮಾಡಿದರೆ ತಿಂಗಳಿಗೆ 2000 ರೂ.ನಿಂದ 3000ರೂ.ವರೆಗೆ ಲಾಭಾಂಶವನ್ನು ನೀಡುವುದಾಗಿ ಹೇಳಿ ನಂಬಿಸಿದ್ದು,
6ಲಕ್ಷ ರೂ. ನಗದು, 31ಗ್ರಾಂ ಚಿನ್ನಾಭರಣವನ್ನು ಸ್ಕೀಮ್ ಮೂಲಕ ಹೂಡಿಕೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಅಲ್ಲದೆ ಇತರ ಗ್ರಾಹಕರಿಗೂ ಇದೇ ರೀತಿ ನಂಬಿಸಿ ಒಟ್ಟು 56,76,000ರೂ. ಮೌಲ್ಯದ 1419.188 ಗ್ರಾಂ ಚಿನ್ನಾಭರಣ ಮತ್ತು 35,88,000ರೂ. ನಗದು ಸೇರಿದಂತೆ ಒಟ್ಟು 92.64ಲಕ್ಷ ರೂ. ಹೂಡಿಕೆ ಮಾಡಿದ್ದು,
ಆರೋಪಿಗಳು ಈ ಹಣ ಮತ್ತು ಚಿನ್ನಾಭರಣವನ್ನು ವಾಪಾಸ್ಸು ನೀಡದೆ ಮೋಸ ಮಾಡಿರುವುದಾಗಿ ದೂರಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪೈಕಿ ಬಿ.ಎಂ.ಜಾಫರ್ ಮತ್ತು ಫರಾಜ್ ಎಂಬವರನ್ನು ಬಂಧಿಸಿದ್ದಾರೆ. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದಾರೆ.