





ಕುಂದಾಪುರ: ಟಿಪ್ಪರ್ ಲಾರಿಯೊಂದು ಕೆಎಸ್ಸಾರ್ಟಿಸಿ ಬಸ್ ಗೆ ಢಿಕ್ಕಿ ಹೊಡೆದ ಪರಿಣಾಮ 7 ಮಂದಿ ಕಾಲೇಜು ವಿದ್ಯಾರ್ಥಿಗಳ ಸಹಿತ 18 ಮಂದಿ ಗಾಯಗೊಂಡ ಘಟನೆ ಕುಂದಾಪುರ ತಾಲೂಕಿನ ತಲ್ಲೂರು – ನೇರಳಕಟ್ಟೆ ಮುಖ್ಯ ರಸ್ತೆಯ ಶೆಟ್ರಕಟ್ಟೆಯ ತಿರುವಿನಲ್ಲಿ ಸೋಮವಾರ ಸಂಜೆ ಸಂಭವಿಸಿದೆ.
ಗಾಯಾಳುಗಳ ಪೈಕಿ ಇಬ್ಬರು ವಿದ್ಯಾರ್ಥಿನಿಯರ ಸ್ಥಿತಿ ಗಂಭೀರವಾಗಿದೆ. ಮೂವರನ್ನು ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಕುಂದಾಪುರದ ಸರಕಾರಿ ಆಸ್ಪತ್ರೆಯಲ್ಲಿ 7 ಮಂದಿ ಚಿಕಿತ್ಸೆ ಪಡೆದಿದ್ದು, ಮೂವರು ಒಳರೋಗಿಗಳಾಗಿ ದಾಖಲಾಗಿದ್ದಾರೆ. ಕುಂದಾಪುರಾದ ಆದರ್ಶ ಆಸ್ಪತ್ರೆಯಲ್ಲಿ 7 ಮಂದಿ ಇದ್ದು, ಐವರು ಒಳರೋಗಿಗಳಾಗಿ, ಚಿನ್ಮಯಿ ಆಸ್ಪತ್ರೆಯಲ್ಲಿ ಒಬ್ಬರು ಒಳರೋಗಿಯಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜೂನಿಯರ್ ಕಾಲೇಜಿನ ವಿದ್ಯಾರ್ಥಿನಿಯರಾದ ನೇರಳಕಟ್ಟೆ ನಿವಾಸಿಗಳಾದ 16 ವರ್ಷ ಪ್ರಾಯದ ಚೈತ್ರಾ ಮತ್ತು ಅರ್ಚನಾ ಗಂಭೀರ ಸ್ಥಿತಿಯಲ್ಲಿದ್ದು, ಮಣಿಪಾಲ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಜಿ ಗ್ರಾಮ ಪಂಚಾಯತ್ ಸದಸ್ಯೆ 50 ವರ್ಷ ಪ್ರಾಯದ ಶಾರದಾ ಅವರಿಗೂ ತೀವ ಸ್ವರೂಪದ ಗಾಯಗಳಾಗಿವೆ.ಟಿಪ್ಪರ್ ಚಾಲಕ ರಾಘವೇಂದ್ರ (40), ವಿದ್ಯಾರ್ಥಿಗಳಾದ ಧನ್ವಿತ್, ಆಶಿಶ್, ಅಭಿಲಾಶ್, ಸತ್ಯವತಿ, ಪ್ರಯಾಣಿಕರಾದ ಮಂಜುನಾಥ್, ಮಮತಾ, ಸನ್ವಿತ್, ಹರೀಶ್, ವಿದ್ಯಾರ್ಥಿನಿಯರಾದ ಸ್ಪಂದನಾ, ಅರ್ಚನಾ, ಶಾರದಾ ಪ್ರಯಾಣಿಕರಾದ ಸಾವಿತ್ರಿ, ಸುಜಾನ್ ಗಾಯಗೊಂಡ ಪ್ರಯಾಣಿಕರು.








