ಲಕ್ಷದ್ವೀಪ: ದೇಶ ವಿರೋಧಿ ಪ್ರಕರಣಕ್ಕೆ ಸಂಬಂದಿಸಿದಂತೆ ಸಿನಿಮಾ ನಿರ್ಮಾಪಕಿ ಆಯಿಷಾ ಸುಲ್ತಾನ್ ವಿರುದ್ಧ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಇದೀಗ ಈ ಕ್ರಮ ಖಂಡಿಸಿ 15 ಜನ ಸ್ಥಳೀಯ ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಮಲಯಾಳಂ ಟಿ.ವಿ ಚಾನೆಲ್ನಲ್ಲಿ ನಡೆದ ಚರ್ಚೆಯ ವೇಳೆ ಲಕ್ಷದ್ವೀಪದಲ್ಲಿ ಕೋವಿಡ್-19 ಹರಡಲು ಕೇಂದ್ರ ಸರ್ಕಾರವು ಜೈವಿಕ ಅಸ್ತ್ರಗಳನ್ನು ಬಳಸಿದೆ ಎಂದು ಆಯೆಷಾ ಆರೋಪಿಸಿದ್ದು, ಇವರ ಹೇಳಿಕೆ ವಿರುದ್ಧ ಬಿಜೆಪಿಯ ಕೆಲ ನಾಯರು ಕೆರಳಿದ್ದರು. ಜೊತೆಗೆ ಆಯೆಷಾ ವಿರುದ್ಧ ದೇಶ ವಿರೋಧಿ ಕೃತ್ಯ ಎಸಗಿದ್ದಾರೆಂದು ಬಿಜೆಪಿ ಮುಖಂಡರು ದೂರಿದ್ದರು.
ಕೇಂದ್ರಾಡಳಿತ ಪ್ರದೇಶದಲ್ಲಿ ಕೋವಿಡ್-19 ಬಗ್ಗೆ ಸುಳ್ಳು ಸುದ್ದಿ ಹರಡಿದ್ದಾರೆ ಎಂಬ ಬಿಜೆಪಿ ಮುಖಂಡರ ದೂರಿನ ಅನ್ವಯ ಆಯೆಷಾ ಸುಲ್ತಾನಾ ವಿರುದ್ಧ ಲಕ್ಷದ್ವೀಪ ಪೊಲೀಸರು ದೇಶದ್ರೋಹ ಪ್ರಕರಣ ದಾಖಲಿಸಿಕೊಂಡಿದ್ದು, ಆಯೆಷಾ ಸುಲ್ತಾನಾ ವಿರುದ್ಧ ದೂರು ದಾಖಲಿಸಿರುವುದು ಸ್ಥಳೀಯ ಬಿಜೆಪಿ ನಾಯಕರ ಆಕ್ರೋಶಕ್ಕೆ ಕಾರಣವಾಗಿದೆ. ಶುಕ್ರವಾರ 15ಕ್ಕೂ ಹೆಚ್ಚು ಬಿಜೆಪಿ ನಾಯಕರು ರಾಜೀನಾಮೆ ನೀಡಿದ್ದಾರೆ.
ಮುಸ್ಲೀಂ ಬಾಹುಳ್ಯವುಳ್ಳ ಲಕ್ಷ ದ್ವೀಪದಲ್ಲಿ ಸ್ವಪಕ್ಷದ ವಿರುದ್ಧ ಸ್ಥಳೀಯ ನಾಯಕರು ತಿರುಗಿ ಬಿದ್ದಿರುವುದು ಇದು ಎರಡನೇ ಬಾರಿಯಾಗಿದ್ದು, ಕಳೆದ ಮೇ ತಿಂಗಳಿನಲ್ಲಿ ಲಕ್ಷದ್ವೀಪ ಆಡಳಿತಾಧಿಕಾರಿ ಪ್ರಫುಲ್ ಖೋಡಾ ಪಟೇಲ್ ಅವರ ಅನಿಯಂತ್ರಿತ ಕ್ರಮಗಳನ್ನು ವಿರೋಧಿಸಿ ಎಂಟು ಬಿಜೆಪಿ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.