ಸುಳ್ಯ: ಪರಿವಾರಕಾನ ಉಡುಪಿ ಗಾರ್ಡನ್ ಹೋಟೆಲ್ ಮುಂಭಾಗದಲ್ಲಿ ಸುಮಾರು ಹತ್ತು ಅಡಿಯಷ್ಟು ಉದ್ದಕ್ಕೆ ಗುಂಡಿ ನಿರ್ಮಾಣವಾಗಿದ್ದು, ಏಕಾಏಕಿ ಭೂಮಿ ಕುಸಿತಕ್ಕೆ ಅವೈಜ್ಞಾನಿಕ ಕಾಮಗಾರಿ ಶಂಕೆ ವ್ಯಕ್ತವಾಗಿದೆ.
ಸುಳ್ಯದಲ್ಲಿ ಜೋರಾದ ಮಳೆ ಸುರಿದಿದ್ದು, ಈ ಹಿನ್ನಲೆಯಲ್ಲಿ ಭೂಕುಸಿತ ಆಗಿದೆ ಎನ್ನುವುದು ಕೆಲವರ ಹೇಳಿಕೆ. ಆದರೆ ಇಂಟರ್ ಲಾಕ್ ಅಳವಡಿಸಿರುವ ಭೂಮಿಯಡಿ ನೀರು ರಭಸವಾಗಿ ನುಗ್ಗದಿದ್ದರೂ ಭೂಕುಸಿತ ಹೇಗೆ ಸಂಭವಿಸಿತು ಎನ್ನುವುದು ಪ್ರಶ್ನೆ.
ಫೋಟೋಗಳು ಎಲ್ಲ ಕಡೆ ವೈರಲ್ ಆಗುತ್ತಿದೆ. ಭೂಕುಸಿತವಾದ ಪಕ್ಕದಲ್ಲೇ ವಿದ್ಯುತ್ ಟ್ರಾನ್ಸ್ಫಾರ್ಮರ್ ಇತ್ತು. ಭೂಕುಸಿತವಾದ ಬೆನ್ನಲ್ಲೇ ಟ್ರಾನ್ಸ್ಫಾರ್ಮರ್ ಧರಾಶಾಯಿಯಾಗಿದೆ. ಅದೃಷ್ಟವಶಾತ್ ವಿದ್ಯುತ್ ಕಂಬ ಹಾಗೂ ಟ್ರಾನ್ಸ್ಫಾರ್ಮರ್ ಬೀಳುವ ಸಂದರ್ಭ ಪವರ್ ಕಟ್ ಆಗಿದ್ದ ಕಾರಣ ದುರಂತ ತಪ್ಪಿದೆ. ಪ್ರತಿ ದಿನವೂ ಹೋಟೆಲ್ ಗೆ ಬರುವ ಕಾರುಗಳು ಅಲ್ಲಿ ಕೂಡ ಪಾರ್ಕಿಂಗ್ ಮಾಡುತ್ತಿದ್ದರು. ಆದರೆ ಇಂದು ಅದೃಷ್ಟವಶಾತ್ ಯಾರೂ ಇರಲಿಲ್ಲ ಎಂದು ತಿಳಿದು ಬಂದಿದೆ. ಯಾವುದೇ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.
ಈ ಕುರಿತಂತೆ ನ.ಪಂ ಮುಖ್ಯಾಧಿಕಾರಿ ಜೊತೆ ವಿವರ ಕೇಳಿದ್ದು ಸ್ಥಳ ಪರಿಶೀಲನೆ ಬಳಿಕ ಮಾಹಿತಿ ನೀಡುವುದಾಗಿ ತಿಳಿಸಿದ್ದಾರೆ. ‘ಸುಡಾ’ ರೂಪುರೇಷೆಗಳ ಅಡಿಯಲ್ಲಿ ಕಟ್ಟಡ ನಿರ್ಮಾಣವಾಗಿದ್ದರೂ ಇದೀಗ ಕಟ್ಟಡದ ಬಳಿ ಕುಸಿತವಾಗಿರುವುದು ಹಲವರ ಆತಂಕಕ್ಕೆ ಕಾರಣವಾಗಿದೆ.