Saturday, August 1, 2026
spot_imgspot_img
spot_imgspot_img

ಡಿವಿಎಸ್ ಬಣ್ಣ ಬಯಲು ಮಾಡ್ತೀನಿ, ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ: ಯತ್ನಾಳ್ ಕಿಡಿ

- Advertisement -
- Advertisement -

ವಿಜಯಪುರ: ಯಡಿಯೂರಪ್ಪ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದೀರಿ, ನಿಮ್ಮ ಬಣ್ಣ ಬಯಲು ಮಾಡ್ತೀನಿ, ಇಲ್ಲವಾದರೆ ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ ಎಂದು ಡಿವಿಎಸ್‌ಗೆ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸವಾಲು ಎಸೆದಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದಾನಂದಗೌಡ ಬಾಯಿ ಮುಚ್ಚಿಕೊಂಡು ಇರಬೇಕು. ಇಲ್ಲದೆ ಹೋದರೆ ಬಂಡವಾಳ ಬಯಲು ಮಾಡುತ್ತೇನೆ. ನಾನು ವಕ್ಫ್ ವಿರುದ್ಧ ಮಾತನಾಡಿದ್ದೇನೆ. ಸದಾನಂದಗೌಡ ಯಾಕೆ ಗಾಬರಿಯಾಗಬೇಕು? ನೀವು ಗಾಬರಿಯಾಗಬೇಡಿ. ನಾಗರಹಾವು-ಎರೆಹುಳ ಎತ್ತನಿಂದೆತ್ತ ಸಂಬಂಧವಯ್ಯ ಸದಾನಂದ. ನೀನು ಮಾತನಾಡಿದ ಕೃತಿಗೂ ನಿನ್ನ ನಾಲಿಗೆಗೂ ಎತ್ತ ಸಂಬಂಧವಯ್ಯ ಸದಾನಂದ. ಇದು ನನ್ನ ಹೊಸ ವಚನ, ಇದು ನನ್ನ ಕೂಡಲಸಂಗಮ ಬಸವವಾಣಿ ಎಂದು ಟಾಂಗ್ ಕೊಟ್ಟಿದ್ದಾರೆ.

ಸದಾನಂದಗೌಡರು ಯಡಿಯೂರಪ್ಪ ಕುಟುಂಬದ ವಿರುದ್ಧ ಮಾತನಾಡಿರುವುದನ್ನು ನಾನು ಬಿಚ್ಚಿಡುತ್ತೇನೆ. ನನಗಿಂತ ಕೆಟ್ಟದಾಗಿ ಮಾತನಾಡಿದ್ದಾರೆ. ದೀಪ ಆರಿದವರ ಬಗ್ಗೆ ನಾನು ಮಾತನಾಡಲ್ಲ. ನಿಮ್ಮ ದೀಪ ಈಗಾಗಲೆ ಆರಿಹೋಗಿದೆ. ನಾನು ಯಾರು ಜೊತೆನೂ ಹೊಂದಾಣಿಕೆ ಮಾಡಿಕೊಂಡಿಲ್ಲ. ನನ್ನ ವಿರುದ್ಧ ಮಾತನಾಡಿದವರ ಬಣ್ಣ ಬಯಲು ಮಾಡುತ್ತೇನೆ. ನೀವು ಯಡಿಯೂರಪ್ಪ ವಿರುದ್ಧ ಕೆಟ್ಟದಾಗಿ ಮಾತನಾಡಿದ್ದೀರಿ, ಇಲ್ಲ ಎನ್ನುವುದಾದರೆ ಧರ್ಮಸ್ಥಳಕ್ಕೆ ಬಂದು ಆಣೆಪ್ರಮಾಣ ಮಾಡಲಿ ಎಂದು ಆಣೆಪ್ರಮಾಣಕ್ಕೆ ಪಂಥಾಹ್ವಾನ ನೀಡಿದರು.

- Advertisement -

Related news

error: Content is protected !!