



ಪುತ್ತೂರು: ಪುತ್ತೂರು ಎಪಿಎಂಸಿ ವಸತಿಗೃಹದಲ್ಲಿ ಅನಧಿಕೃತವಾಗಿ ವಾಸ್ತವ್ಯವಿದ್ದ ಎಪಿಎಂಸಿ ದಿನಗೂಲಿ ನೌಕರೆಯ ಕೊಠಡಿಗೆ ಬುಧವಾರ ಬೀಗ ಜಡಿಯುವ ಮೂಲಕ ಕಳೆದ ಒಂದು ವರ್ಷದಿಂದ ನಡೆಯುತ್ತಿದ್ದ ವಿವಾದಕ್ಕೆ ಕೊನೆಗೂ ಅಂತ್ಯ ಸಿಕ್ಕಿದಂತಾಗಿದೆ.
ವಸತಿಗೃಹದ ಕೊಠಡಿ ಸಂಖ್ಯೆ 3ನ್ನು ಪ್ರೇಮಾ ಕುಮಾರಿ ಎಂಬವರು ಪಡೆದುಕೊಂಡಿದ್ದು, ಇದರಲ್ಲಿ ಎಪಿಎಂಸಿಯಲ್ಲಿ ದಿನಗೂಲಿ ನೌಕರಿ ಮಾಡುತ್ತಿರುವ ಜಾನಕಿ ಎಂಬವರು ಅನಧಿಕೃತವಾಗಿ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಎಪಿಎಂಸಿ ಕಾರ್ಯದರ್ಶಿ ಎಂ.ಸಿ.ಪಡಗಾನೂರು ಅವರು ಪ್ರೇಮಾಕುಮಾರಿ ಅವರಿಗೆ ನೋಟೀಸು ನೀಡಿ ಕೊಠಡಿ ತೆರವು ಮಾಡುವಂತೆ ಸೂಚನೆ ನೀಡಿದ್ದರು. ಈ ಕೊಠಡಿ ತೆರವು ಮಾಡಲು ನನ್ನ ಅಭ್ಯಂತರ ಇಲ್ಲ ಎಂದು ಆಕೆ ಲಿಖಿತವಾಗಿ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಕೊಠಡಿಯಲ್ಲಿ ಅನಧಿಕೃತವಾಗಿ ವಾಸವಾಗಿರುವ ದಿನಗೂಲಿ ನೌಕರೆಗೆ ಸುಮಾರು 4 ತಿಂಗಳ ಕಾಲಾವಕಾಶ ನೀಡಲಾಗಿತ್ತು. ಆದರೆ ಆಕೆ ಕೊಠಡಿ ತೆರವು ಮಾಡದ ಹಿನ್ನಲೆಯಲ್ಲಿ ಎಪಿಎಂಸಿ ಆಡಳಿತಾಧಿಕಾರಿ ತಹಶೀಲ್ದಾರ್ ಪುರಂದರ ಹೆಗ್ಡೆ ಅವರ ಅನುಮತಿಯೊಂದಿಗೆ ಈ ಕೊಠಡಿಗೆ ಬೀಗ ಜಡಿದು ಪ್ರವೇಶ ನಿರಾಕರಿಸಲಾಗಿದೆ.
ಬೆಳಿಗ್ಗೆ 11.30ಕ್ಕೆ ಕೊಠಡಿ ತೆರವು ಮಾಡುವುದಾಗಿ ಎಪಿಎಂಸಿ ಕಾರ್ಯದರ್ಶಿ ನೋಟೀಸು ನೀಡಿದ್ದು, ಈ ಸಂದರ್ಭ ಹಾಜರಿರಬೇಕಾದ ದಿನಗೂಲಿ ನೌಕರೆ ಜಾನಕಿ ಅವರು ಎಪಿಎಂಸಿ ಕಚೇರಿಯಲ್ಲಿ ಕುಳಿತು ಪ್ರತಿರೋಧ ತೋರಿದರು. ಕಾರ್ಯದರ್ಶಿ ಸೇರಿದಂತೆ ಎಪಿಎಂಸಿ ಅಧಿಕಾರಿ-ಸಿಬಂದಿಗಳು ಮನವಿ ಮಾಡಿಕೊಂಡರೂ ಆಕೆ ಮಾತ್ರ ಬರಲೇ ಇಲ್ಲ. ಪೊಲೀಸ್ ಅಧಿಕಾರಿಗಳೂ ಈಕೆಯನ್ನು ಕರೆದು ತರುವ ಪ್ರಯತ್ನ ನಡೆಸಿದರು. ಆದರೆ ಆಕೆ ಕಚೇರಿ ಬಿಟ್ಟು ಹೊರಬರಲಿಲ್ಲ.
ಕೊನೆಗೆ ಕೊಠಡಿಗೆ ಬೀಗ ಜಡಿದು ಪ್ರವೇಶ ನಿರಾಕರಣೆ ಮಾಡಲಾಯಿತು. ಆದರೆ ಜಾನಕಿ ಅವರಿಗೆ ಸೇರಿದ ವಸ್ತುಗಳು ಕೂಡಾ ಇದೀಗ ಕೊಠಡಿಯಲ್ಲಿಯೇ ಬಾಕಿಯಾಗಿದೆ ಎಂದು ತಿಳಿದುಬಂದಿದೆ.