ಬೆಂಗಳೂರು: ಪ್ರೀತಿಸಲು ನಿರಾಕರಿಸಿದ ನಾದಿನಿಯನ್ನು 9 ಬಾರಿ ಇರಿದು ಕೊಲ್ಲಲು ಯತ್ನಿಸಿದ ಭಾವ, ತಾನೂ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.
ಇರಿತಕ್ಕೆ ಒಳಗಾದ ನಾದಿನಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಚೂರಿಯಿಂದ ಇರಿದ ಯಲಹಂಕದ ನಿವಾಸಿ ಫುಡ್ ಡೆಲಿವರಿ ಬಾಯ್ ನಾಗರಾಜ್ (32) ಮೃತದೇಹ ಯಲಹಂಕದ ರೈತರ ಸಂತೆ ಬಳಿ ಸಿಕ್ಕಿದೆ.
ನಾದಿನಿ ನೀಡಿದ ದೂರಿನ ಆಧಾರದ ಮೇರೆಗೆ ಭಾವ ನಾಗರಾಜ್ ವಿರುದ್ಧ ಯಲಹಂಕ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಬೆಂಗಳೂರಿನ ಯಲಹಂಕದ ಕಟ್ಟಿಗೇನಹಳ್ಳಿಯಲ್ಲಿ ಯುವತಿ, ಆಕೆಯ ತಾಯಿ, ಅಕ್ಕ ಹಾಗೂ ಭಾವ ನಾಗರಾಜ್ ಒಂದೇ ಮನೆಯಲ್ಲಿ ವಾಸಿಸುತ್ತಿದ್ದರು. ನಾದಿನಿ ಇತ್ತೀಚೆಗೆ ಕಾಲೇಜು ಬಿಟ್ಟು ಮನೆಯಲ್ಲೇ ಇದ್ದಳು. ಆಕೆ ಒಂಟಿಯಾಗಿದ್ದಾಗ ನಾಗರಾಜ್ ಕಿರುಕುಳ ಕೊಡುತ್ತಿದ್ದ. ನೀನು ನನಗೆ ಬೇಕು ಎಂದು ಪೀಡಿಸುತ್ತಿದ್ದ. ಇತ್ತೀಚೆಗೆ ಪತ್ನಿ ಇಲ್ಲದಿರುವ ಸಮಯದಲ್ಲಿ ಪ್ರೇಮ ನಿವೇದನೆ ಮಾಡಿದ್ದ.
ಅದನ್ನು ತಿರಸ್ಕರಿಸಿದ ಆಕೆ ಈ ರೀತಿ ಮಾಡದಂತೆ ಭಾವನಿಗೆ ಬುದ್ಧಿ ಹೇಳಿದ್ದಳು. ಇದರಿಂದ ಆಕ್ರೋಶಗೊಂಡ ನಾಗರಾಜ್, ನ.25ರಂದು ಬೆಳಗ್ಗೆ 10.30ರಲ್ಲಿ ನಾದಿನಿಯೊಬ್ಬಳೇ ಮನೆಯಲ್ಲಿದ್ದಾಗ ತರಕಾರಿ ಕತ್ತರಿಸುವ ಚಾಕುವಿನಿಂದ ಆಕೆಯ ಹೊಟ್ಟೆ, ಭುಜ, ಎದೆ ಸೇರಿ 9 ಕಡೆ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿ, ಪರಾರಿಯಾಗಿದ್ದ. ನಾದಿನಿಯ ಚೀರಾಟ ಕೇಳಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.