ಗದಗ: ಪ್ರಿಯಕರನೇ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಎಸಗಿ, ವಿಚಿತ್ರವಾಗಿ ಕೊಲೆ ಮಾಡಿದ ಆಘಾತಕಾರಿ ಘಟನೆ ನಡೆದಿದೆ. ಬೆಳಗಾವಿ ಜಿಲ್ಲೆ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜಿಲ್ಲೆಯ ನರಗುಂದ ಪಟ್ಟಣದ ಬಾಲಕಿ ಮಧುಶ್ರಿ(14) ಕೊಲೆಯಾಗಿದೆ. ಆಕೆಯ ಪ್ರಿಯಕರನೇ ಅಪಹರಿಸಿ ಬೆಳಗಾವಿ ಜಿಲ್ಲೆ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿ, ಕತ್ತು ಕತ್ತರಿಸಿ, ಮುಖಕ್ಕೆ ಆ್ಯಸಿಡ್ಹಾಕಿ ಸುಟ್ಟು ಕೊಲೆ ಮಾಡಿರುವ ಬಗ್ಗೆ ವರದಿಯಾಗಿದೆ. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ನಾಗನೂರ ಗ್ರಾಮದ 23 ವರ್ಷದ ಪ್ರಿಯಕರ ಸದ್ದಾಮ್ ಈ ಕೃತ್ಯವೆಸಗಿದ್ದಾನೆ.
ಧಾರವಾಡ ಜಿಲ್ಲೆಯ ಯುವಕ ಗದಗ ಜಿಲ್ಲೆಯ ಬಾಲಕಿಯನ್ನು ಬೆಳಗಾವಿ ಜಿಲ್ಲೆಗೆ ಕರೆದೊಯ್ದು ಅತ್ಯಾಚಾರ ಎಸಗಿ ಕ್ರೂರವಾಗಿ ಕೊಲೆ ಮಾಡಿದ್ದಾನೆ. ಮಾರ್ಚ್ 20ರಂದು ಬಾಲಕಿ ನಾಪತ್ತೆಯಾಗಿದ್ದು, ಮಾ.23 ರಂದು ಪಾಲಕರು ನರಗುಂದ ಪೊಲೀಸ್ ಠಾಣೆಯಲ್ಲಿ ಬಾಲಕಿ ಕಾಣೆಯಾಗಿರುವ ಬಗ್ಗೆ ದೂರು ನೀಡಿದ್ದಾರೆ. ಕಳೆದ 2 ದಿನಗಳ ಹಿಂದೆ ಬಾಲಕಿಯ ಕೊಳೆತ ಸ್ಥಿತಿಯ ಶವ ಪತ್ತೆಯಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಬಾಲಕಿಯ ಮೊಬೈಲ್ ಟ್ರ್ಯಾಪ್ ಮಾಡಿದ ವೇಳೆ ಆಕೆಯ ಪ್ರಿಯಕರ ಸದ್ದಾಮ್ ಸಿಕ್ಕಿಬಿದ್ದಿದ್ದಾನೆ. ಬಳಿಕ ಆರೋಪಿಯನ್ನು ಕರೆತಂದು ವಿಚಾರಣೆಗೆ ಒಳಪಡಿಸಿದಾಗ ಮಾಡಿದ ಎಲ್ಲ ಕೃತ್ಯಗಳ ಬಗ್ಗೆ ಬಾಯ್ಬಿಟ್ಟಿದ್ದಾನೆ. ಆಕೆಗೆ ಬೇರೆ ಹುಡುಗರ ಜೊತೆಗೆ ಸಂಬಂಧವಿತ್ತು. ಅದೇ ಕಾರಣಕ್ಕೆ ಕೊಲೆ ಮಾಡಿದ್ದೇನೆ ಎಂದು ಪೊಲೀಸರ ಎದುರು ತಪ್ಪೊಪ್ಪಿಕೊಂಡಿದ್ದಾನೆ.
ಸದ್ದಾಮ್ ಧಾರವಾಡ ಜಿಲ್ಲೆ ನಾಗನೂರ ಗ್ರಾಮದವನಾಗಿದ್ದು, ಆಗಾಗ ನರಗುಂದದ ಸಂಬಂಧಿಕರ ಮನೆಗೆ ಬರುತ್ತಿದ್ದ. ಆಗ ಬಾಲಕಿ ಜೊತೆ ಸ್ನೇಹ ಬೆಳೆದು ಪ್ರೇಮಾಂಕುರವಾಗಿತ್ತು. ಕಳೆದ 2 ವರ್ಷಗಳಿಂದ ಇಬ್ಬರು ಪ್ರೀತಿ ಮಾಡುತ್ತಿದ್ದರು ಎನ್ನಲಾಗುತ್ತಿದೆ. ಈ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವುದರಿಂದ, ಗದಗ ಪೊಲೀಸರು ಆರೋಪಿ ಸದ್ದಾಮ್ನನ್ನು ರಾಮದುರ್ಗ ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಕೊಲೆ ಮಾಡಿದ ಆರೋಪಿಗೆ ಗಲ್ಲು ಶಿಕ್ಷೆಯಾಗಲಿ ಎಂದು ಪೋಷಕರು ಒತ್ತಾಯಿಸುತ್ತಿದ್ದಾರೆ. ಕೃತ್ಯದ ಬಗ್ಗೆ ನರಗುಂದ ಪಟ್ಟಣದ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.