ಮಹಾರಾಷ್ಟ್ರ : ರಾಜ್ಯದಲ್ಲಿ ಲೇಡಿ ಸಿಂಗಂ ಎಂಬುದಾಗಿಯೇ ಖ್ಯಾತಿಯಾಗಿದ್ದಂತ ಮಹಿಳಾ ಅರಣ್ಯ ಅಧಿಕಾರಿ ದೀಪಾಲಿ ಚೌವ್ಹಾಣ್ ಮೊಹೈತ್ ಮೃತದೇಹ, ಆತ್ಮಹತ್ಯೆಯ ರೀತಿಯಲ್ಲಿ ದೊರೆತಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ. ಅಲ್ಲದೇ ಅವರು ಬರೆದಿದ್ದು ಎನ್ನಲಾದಂತ ಡೆತ್ ನೋಟ್ ಕೂಡ ಸಿಕ್ಕಿದ್ದು, ಡೆತ್ ನೋಟ್ ನಲ್ಲಿ ಅಧಿಕಾರಿಯ ಕರಾಳ ಮುಖವನ್ನು ಬಯಲು ಮಾಡಿದ್ದಾರೆ ಎನ್ನಲಾಗಿದೆ.
28 ವರ್ಷದ ಆರ್ ಎಫ್ ಓ ಆಗಿ ಕಾರ್ಯ ನಿರ್ವಹಿಸುತ್ತಿದ್ದಂತ ಮಹಾರಾಷ್ಟ್ರದ ಮೆಲ್ಘಟ್ ಹುಲಿ ಸಂರಕ್ಷಿತಾರಣ್ಯ(ಎಂ ಆರ್ ಟಿ)ಗೆ ಪೋಸ್ಟಿಂಗ್ ಮಾಡಲಾಗಿತ್ತು. ಇಂತಹ ಅಧಿಕಾರಿ ಉತ್ತಮ ಕೆಲಸಗಳಿಂದಾಗಿ ಮಹಾರಾಷ್ಟ್ರದಲ್ಲಿ ಲೇಡಿ ಸಿಂಗಂ ಅಧಿಕಾರಿಯೆಂದೇ ಖ್ಯಾತಿಯಾಗಿದ್ದರು.
ಮೆಲ್ಘಟ್ ಹುಲಿ ಸಂರಕ್ಷಿತಾರಣ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಂತ ಇವರು, ಹರಿಸಾಲ್ ಗ್ರಾಮದಲ್ಲಿನ ಹೆಡ್ ಕ್ವಾಟ್ರಾಸ್ ನಲ್ಲಿ ವಾಸವಾಗಿದ್ದರು. ಇಂತಹ ಇವರು, ತಮ್ಮ ಕ್ವಾಟ್ರಾಸ್ ನಲ್ಲಿಯೇ ಸರ್ವಿಸ್ ರಿವಾಲ್ವಾರ್ ನಿಂದ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂಬುದಾಗಿ ತಿಳಿದು ಬಂದಿದೆ.
ಆತ್ಮಹತ್ಯೆಗೂ ಮುನ್ನಾ ಡೆತ್ ನೋಟ್ ಬರೆದಿದ್ದು, ಕೆಲ ತಿಂಗಳಿನಿಂದ ದೀಪಾಲಿಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ ವಿನೋದ್ ಶಿವಕುಮಾರ್ ಅವರು ಲೈಂಗಿಕ ಕಿರುಕುಳ ನೀಡುತ್ತಿರುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ಇದರಿಂದಾಗಿ ಶಿವಕುಮಾರ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯಿಸಿರುವಂತ ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್, ಪ್ರಕರಣ ಕುರಿತಂತೆ ಸಮಗ್ರ ತನಿಖೆ ನಡೆಸುವುದು. ತಪ್ಪಿತಸ್ಥ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.