




ಕೊಣಾಜೆ: ನರಿಂಗಾನ ಗ್ರಾಮದ ಕಲ್ಲರಕೋಡಿ ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಮಹಮ್ಮದ್ ಅರ್ಷದ್ (30) ಎಂಬವರು ನಾಪತ್ತೆಯಾಗಿದ್ದು, ಕೊಣಾಜೆ ಪೊಲೀಸರು ಲುಕೌಟ್ ನೋಟಿಸ್ ಜಾರಿ ಮಾಡಿದ್ದಾರೆ.
ಮೂಲತಃ ಶಿವಮೊಗ್ಗ ಕೋಟೆ ಗಂಗೂರಿನ ಮೊಹಮ್ಮದ್ ಅರ್ಷದ್ ಪತ್ನಿಯೊಂದಿಗೆ ನರಿಂಗಾನದಲ್ಲಿ ಬಾಡಿಗೆ ವಾಸವಾಗಿದ್ದರು. ಇವರ ಪುತ್ರಿ ಶಿವಮೊಗ್ಗದ ಪತ್ನಿಯ ತಾಯಿಮನೆಯಲ್ಲಿ ವಾಸವಾಗಿದ್ದು, ಮಾ.23ರಂದು ಮೊಹಮ್ಮದ್ ಅರ್ಷದ್ ರವರು ಗಾರೆ ಕೆಲಸ ಮುಗಿಸಿ ಸಂಜೆ 4 ಗಂಟೆಗೆ ಮನೆಗೆ ಬಂದವರು ಪತ್ನಿಯಲ್ಲಿ ನಾನು ಮಗಳನ್ನು ನೋಡಲು ಶಿವಮೊಗ್ಗಕ್ಕೆ ಹೋಗಬೇಕೆಂದು ತಿಳಿಸಿ ರಾತ್ರಿ 8ಗಂಟೆಗೆ ಮನೆಯಿಂದ ಹೊರಟಿದ್ದರು.

ನಾನು ಶಿವಮೊಗ್ಗಕ್ಕೆ ತಲುಪಿದ ಕೂಡಲೇ ಫೋನ್ ಮಾಡುವುದಾಗಿ ತಿಳಿಸಿದ್ದು, ಆದರೆ ಮಾ.24 ರಂದು ಬೆಳಿಗ್ಗೆ 6 ಗಂಟೆಯಾದರೂ ಮೊಹಮ್ಮದ್ ಅರ್ಷದ್ ರವರು ಫೋನ್ ಮಾಡದೇ ಇದುದ್ದರಿಂದ ಪತ್ನಿ, ಮೊಹಮ್ಮದ್ ಅರ್ಷದ್ ರವರಿಗೆ ಫೋನ್ ಮಾಡಿದಾಗ ಸ್ವೀಚ್ ಆಫ್ ಆಗಿತ್ತು. ಬಳಿಕ ಅವರ ತಾಯಿಯ ಪೋನ್ ಗೆ ಕರೆ ಮಾಡಿ ವಿಚಾರಿಸಲಾದರೂ ಮೊಹಮ್ಮದ್ ಅರ್ಷದ್ ರವರು ಅಲ್ಲಿಗೂ ಕೂಡಾ ಬಂದಿರುವುದಿಲ್ಲ ಎಂದು ತಿಳಿಸಿದ್ದರು. ಬಳಿಕ ಅವರ ಪತ್ನಿ ತನ್ನ ಗಂಡನನ್ನು ಹುಡುಕಿಕೊಡುವಂತೆ ಕೊಣಾಜೆ ಪೊಲೀಸರಿಗೆ ದೂರು ನೀಡಿದ್ದಾರೆ.








