ಉಡುಪಿ: ಆಳ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ್ದ ವೇಳೆಯಲ್ಲಿ ಬೋಟಿನಿಂದ ಕಾಲು ಜಾರಿ ಸಮುದ್ರಕ್ಕೆ ಬಿದ್ದು ಮೀನುಗಾರರೋರ್ವರು ಮೃತಪಟ್ಟಿರುವ ಘಟನೆ ಉಡುಪಿ ಜಿಲ್ಲೆಯ ಮಲ್ಪೆಯ ಕಡಲತೀರದಿಂದ ಸುಮಾರು 13 ನಾಟಿಕಲ್ ಮೈಲಿ ದೂರದಲ್ಲಿ ನಡೆದಿದೆ.

ಮೀನುಗಾರ ಸುಧಾಕರ ವೆಂಕಣ್ಣ ಹೊಸಕಟ್ಟಿ (39) ಮೃತ ಮೀನುಗಾರರು. ಜನವರಿ 10 ರಂದು ಸಂಜೆ ಮಲ್ಪೆ ಬಂದರಿನಿಂದ ತ್ರಿಜಲ್ ಎಂಬ ಆಳವಾದ ಸಮುದ್ರಕ್ಕೆ ಬೋಟಿನ ಮೂಲಕ ಮೀನುಗಾರಿಕೆಗೆ ತೆರಳಿದ್ದರು. ಸುಧಾಕರ ವೆಂಕಣ್ಣ ಹೊಸಕಟ್ಟಿ ಅವರ ಜೊತೆಗೆ ಉಮೇಶ್, ರಾಮ, ಶರತ್ ಹಾಗೂ ಚುಡಾಮಣಿ ಅವರು ತೆರಳಿದ್ದಾರೆ.

ಮಲ್ಪೆ ಬಂದರಿನಿಂದ ಸುಮಾರು 13 ನಾಟಿಕಲ್ ಮೈಲ್ ದೂರದಲ್ಲಿ ಜನವರಿ 13ರಂದು ಮಧ್ಯರಾತ್ರಿ 1 ಗಂಟೆಯ ಸುಮಾರಿಗೆ ಮೀನುಗಾರಿಕೆ ನಡೆಸುತ್ತಿದ್ದ ವೇಳೆಯಲ್ಲಿ, ಸುಧಾಕರ ವೆಂಕಣ್ಣ ಆಕಸ್ಮಿಕವಾಗಿ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ. ಈ ವೇಳೆಯಲ್ಲಿ ಜೊತೆಗಿದ್ದ ಮೀನುಗಾರರು ಅವರ ರಕ್ಷಣೆಗೆ ಮುಂದಾಗಿದ್ದಾರೆ.

ಸುಮಾರು ಒಂದೂವರೆ ದಿನಗಳ ಕಾಲ ತ್ರಿಜಲ್ ಬೋಟಿನಲ್ಲಿದ್ದ ಮೀನುಗಾರರು ಇತರ ಬೋಟುಗಳ ಸಹಾಯದೊಂದಿಗೆ ಹುಡುಕಾಟ ನಡೆಸಿದ್ದಾರೆ. ಜನವರಿ 15 ರಂದು ಮಧ್ಯಾಹ್ನದ ವೇಳೆಗೆ ಸುಮಾರು 10 ನಾಟಿಕಲ್ ಮೈಲಿ ದೂರದಲ್ಲಿ ಸುಧಾಕರ ವೆಂಕಣ್ಣ ರವರ ಮೃತದೇಹ ಪತ್ತೆಯಾಗಿದೆ. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡಿರುವ ಮಲ್ಪೆ ಠಾಣೆಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

