ಮಲ್ಪೆ: ಸೇತುವೆ ಮೇಲೆ ಬೈಕ್, ಚಪ್ಪಲಿ ಬಿಟ್ಟು ನಾಪತ್ತೆ ನಾಟಕವಾಡಿದ್ದ ಯುವಕ ದಾವಣಗೆರೆಯಲ್ಲಿ ಪತ್ತೆಯಾಗಿದ್ದಾನೆ.
ನಾಟಕವಾಡಿದ ಯುವಕ ದಾವಣಗೆರೆಯ ಶಿವಪ್ಪ ನಾಯ್ಕ ಎಂದು ತಿಳಿದುಬಂದಿದೆ. ಕಟ್ಟಿಕೊಂಡವಳನ್ನು ಬಿಟ್ಟು ಇಟ್ಟುಕೊಂಡವಳೊಂದಿಗೆ ಸಂಸಾರ ನಡೆಸಲು, ಪೊಲೀಸರ ಹಾದಿ ತಪ್ಪಿಸುವ ಉದ್ದೇಶದಿಂದ ನೀರಿನಲ್ಲಿ ಮುಳುಗಿ ನಾಪತ್ತೆ ನಾಟಕವಾಡಿದ್ದ ಎನ್ನಲಾಗಿದೆ. ಪೋಲೀಸರು ಆತನನ್ನು ಪತ್ತೆ ಹಚ್ಚಿ ಮಲ್ಪೆ ಪೊಲೀಸ್ ಠಾಣೆಗೆ ಕರೆ ತಂದಿದ್ದಾರೆ.
ದಾವಣಗೆರೆಯ ಉತ್ಕಟಿ ತಾಂಡದ ಆಶಾ ಅವರನ್ನು 6 ತಿಂಗಳ ಹಿಂದೆ ಪ್ರೀತಿಸಿ ಮದುವೆಯಾಗಿ ಮಲ್ಪೆ ಕೊಳದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು, ಮಲ್ಪೆ ಮೀನುಗಾರಿಕೆ ಬಂದರಿನಲ್ಲಿ ಮೀನು ಹೋರುವ ಕೆಲಸ ಮಾಡಿಕೊಂಡಿದ್ದರು. ಹೊಸಪೇಟೆ ಹರಪ್ಪನಹಳ್ಳಿಯ ಕಮಲಿಯೊಂದಿಗೆ ಇದರ ಮಧ್ಯೆ ಸಂಪರ್ಕ ಬೆಳೆಸಿಕೊಂಡಿದ್ದನು. ಕೆಲವು ದಿನಗಳಿಂದ ಕಟ್ಟಿಕೊಂಡ ಹೆಂಡತಿಯೊಂದಿಗೆ ಇದೇ ವಿಚಾರದಲ್ಲಿ ವೈಮನಸ್ಸು ಹೊಂದಿ ಜಗಳಕ್ಕೂ ಕಾರಣವಾಗಿತ್ತು. ಕಮಲಿಯೂ ಕೂಡ ಮೀನುಗಾರಿಕೆ ಬಂದರಿನಲ್ಲಿ ಕೆಲಸ ಮಾಡುತ್ತಿದ್ದಳು.
ಮುಳುಗು ತಜ್ಞರಿಂದ ಹುಡುಕಾಟ:
ಆತನ ಬೈಕ್ ಮತ್ತು ಚಪ್ಪಲಿಯು ಸೆ. 23ರಂದು ಸೇತುವೆಯ ತಡೆಗೋಡೆಯಲ್ಲಿ ಕಂಡುಬಂದಿತ್ತು. ಈ ಬಗ್ಗೆ ನಾಪತ್ತೆ ಪ್ರಕರಣ ದಾಖಲಾಗಿತ್ತು. ಈತ ಸೇತುವೆ ಕೆಳಗೆ ಬಿದ್ದಿದ್ದಾನೆ ಎಂಬ ಶಂಕೆಯಿಂದ ಪೊಲೀಸರ ವಿನಂತಿಯ ಮೇರೆಗೆ ಮುಳುಗು ತಜ್ಞ ಈಶ್ವರ ಮಲ್ಪೆ ಅವರು ಸ್ಕೂಬಾ ಧರಿಸಿ ಸುಮಾರು ಒಂದು ತಾಸು ನೀರಿನಲ್ಲಿ ಜಾಲಾಡಿದರೂ ಪತ್ತೆಯಾಗಲಿಲ್ಲ. ಪೊಲೀಸರು ಅನುಮಾನಗೊಂಡು ಮುಂದುವರಿಸಿ, ಆತನ ಮೊಬೈಲ್ ಆನ್ ಮಾಡಿದಾಗ ಕುಂಜಿಬೆಟ್ಟಿನ ಬ್ಯಾಂಕಿನಿಂದ 24 ಸಾವಿರ ರೂ. ಡ್ರಾ ಮಾಡಿದ ಮೆಸೇಜ್ ಬಂದಿತ್ತು.ಇದರ ಆಧಾರದಲ್ಲಿ ಆತ ಜೀವಂತ ಇದ್ದಾನೆಂದು ಪೊಲೀಸರಿಗೆ ತಿಳಿಯಿತು. ಸಂಬಂಧಿಕರ ನೆರವಿನಿಂದ ಆತನ ಇರುವಿಕೆಯ ಮಾಹಿತಿ ಪಡೆದು ಆತನನ್ನು ಊರಿನಿಂದ ಇಲ್ಲಿಗೆ ಕರೆಸಿಕೊಳ್ಳಲಾಯಿತು.
ಹಾದಿ ತಪ್ಪಿಸಲು ಆಡಿದ್ದ ನಾಟಕ ಆತನನ್ನು ಮಲ್ಪೆ ಪೊಲೀಸರು ಕರೆಸಿದ ವಿಚಾರಣೆ ನಡೆಸುವ ವೇಳೆ ತಾನು ಮಾಡಿದ್ದೆಲ್ಲವನ್ನು ಆತ ಬಾಯ್ಬಿಟ್ಟಿದ್ದಾನೆ. ಬೈಕ್ ಅಪಘಾತವಾಗಿ ಸೇತುವೆಯಿಂದ ಹೊಳೆಗೆ ಬಿದ್ದು ನಾಪತ್ತೆಯಾಗಿರುವ ಬಗ್ಗೆ ಬಿಂಬಿಸಿ ನಾಟಕವಾಡಿದ್ದಾನೆ. ಸೇತುವೆಯಲ್ಲಿ ಬೈಕ್ನ ಬ್ರೇಕ್ ಒತ್ತಿ, ಎಕ್ಸಲೇಟರ್ ಜಾಸ್ತಿ ಮಾಡಿ ಒಮ್ಮೆಲೆ ಬಿಟ್ಟಾಗ ಅದು ಸೇತುವೆ ತಡೆಗೋಡೆಗೆ ತಾಗಿ ಅಪಘಾತ ನಡೆದಂತೆ ಬಿಂಬಿಸಿ, ಆ ಬಳಿಕ ಕೋಳಿಯನ್ನು ಕೊಯ್ದು ಅದರ ರಕ್ತವನ್ನು ರಸ್ತೆ ಮೇಲೆ ಹರಿಸಿ ಅಪಘಾತವಾಗಿ ತಾನು ಹೊಳೆಗೆ ಎಸೆಯಲ್ಪಟ್ಟಿದ್ದೇನೆ ಎಂಬ ನಾಟಕವಾಡಿದ. ಒಂದು ಕಾಲಿನ ಮೆಟ್ಟು ಮತ್ತು ಮೊಬೈಲನ್ನು ಅಲ್ಲೇ ಬಿಟ್ಟಿದ್ದಾನೆ. ಆ ಬಳಿಕ ಉಡುಪಿಯ ಲಾಡ್ಜ್ನಲ್ಲಿ ಇದ್ದು ಅಂದು ರಾತ್ರಿ ಊರಿಗೆ ತೆರಳಿ ಸಂಬಂಧಿಕರ ಮನೆಯಲ್ಲಿ ಇದ್ದೆನೆಂದು ಹೇಳಿದ್ದಾನೆ. ಇದೆಲ್ಲ ಜನರ ಹಾದಿ ತಪ್ಪಿಸಲು ಈತ ಮಾಡಿದ ನಾಟಕ ಎಂದು ಒಪ್ಪಿಕೊಂಡಿದ್ದಾನೆ. ಈತನಿಗೆ ಮೊದಲ ಹೆಂಡತಿ ಜತೆ ಸಂಸಾರ ನಡೆಸುವಂತೆ ಪೊಲೀಸರು ಬುದ್ದಿವಾದ ಹೇಳಿ ಕಳುಹಿಸಿಕೊಟ್ಟಿದ್ದಾರೆ.