ಪಶ್ಚಿಮ ಬಂಗಾಳ: ನಂದಿಗ್ರಾಮದಲ್ಲಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಮೇಲೆ ಬುಧವಾರ ಹಲ್ಲೆ ನಡೆದಿದ್ದು, ಇದನ್ನು ವಿರೋಧಿಸಿ ಪಶ್ಚಿಮ ಬಂಗಾಳದಲ್ಲಿ ಪ್ರತಿಭಟನೆಗಳು ನಡೆಯುತ್ತಿದೆ. ಈ ಹಿನ್ನಲೆಯಲ್ಲಿ ಅವರು ಗುರುವಾರ (ಇಂದು) ರಾಜ್ಯದ ಜನರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ವಿಡಿಯೋ ಸಂದೇಶ ರವಾನಿಸಿದ್ದಾರೆ.
ಮುಂಬರುವ ವಿಧಾನಸಭಾ ಚುನಾವಣೆಗೆ ನಂದಿಗ್ರಾಮದಲ್ಲಿ ನಾಮಪತ್ರ ಸಲ್ಲಿಸಿದ ಕೆಲವೇ ಗಂಟೆಗಳ ಅಂತರದಲ್ಲಿ ಅವರ ಮೇಲೆ ದಾಳಿ ಸಂಭವಿಸಿದೆ ಎನ್ನಲಾಗಿದೆ. ಪ್ರಾಥಮಿಕ ವೈದ್ಯಕೀಯ ಪರೀಕ್ಷೆಗಳ ಪ್ರಕಾರ, ಅವರ ಎಡ ಪಾದದ ಮೂಳೆಗೆ ತೀವ್ರವಾದ ಗಾಯಗಳಾಗಿದ್ದು, ಬಲ ಭುಜ, ಮುಂದೋಳು ಮತ್ತು ಕುತ್ತಿಗೆಗೂ ಗಾಯಗಳಾಗಿದೆ ಎಂದು ಸರ್ಕಾರಿ ಎಸ್ಎಸ್ಕೆಎಂ ಆಸ್ಪತ್ರೆಯ ಹಿರಿಯ ವೈದ್ಯರು ತಿಳಿಸಿದ್ದಾರೆಂದು ಪಿಟಿಐ ವರದಿ ಮಾಡಿತ್ತು.
ಇದೀಗ ಆಸ್ಪತ್ರೆಯಿಂದಲೆ ಅವರ ವೀಡಿಯೋ ಸಂದೇಶವನ್ನು ಅವರ ಪಕ್ಷದ ಟ್ವಿಟರ್ ಖಾತೆ ಬಿಡುಗಡೆ ಮಾಡಿದೆ. ಅದರಲ್ಲಿ ಮಮತಾ, “ನಾನು ನಿನ್ನೆ ತೀವ್ರವಾಗಿ ಗಾಯಗೊಂಡಿದ್ದೇನೆ ಎಂಬುದು ನಿಜ. ನನ್ನ ಕೈ, ಕಾಲಿನಲ್ಲಿ ಇನ್ನೂ ನೋವು, ಗಾಯಗಳಿವೆ. ನಿನ್ನೆ, ನನ್ನ ತಲೆ ಮತ್ತು ಎದೆಯಲ್ಲಿ ನೋವು ಕಾಣಿಸಿಕೊಂಡಿತ್ತು. ಆ ಸಮಯದಲ್ಲಿ ನಾನು ಪ್ರಾರ್ಥನೆ ಸಲ್ಲಿಸುತ್ತಿದ್ದೆ. ನನ್ನನ್ನು ಜೋರಾಗಿ ತಳ್ಳಲಾಗಿತ್ತು ಮತ್ತು ಇದರಿಂದಾಗಿ ಕಾಲು ಕಾರಿನಲ್ಲಿ ಸಿಲುಕಿಕೊಂಡಿತ್ತು” ಎಂದು ಮಮತಾ ವೀಡಿಯೊದಲ್ಲಿ ಹೇಳಿದ್ದಾರೆ.
“ಪ್ರತಿಯೊಬ್ಬರೂ ಶಾಂತವಾಗಿರಲು ಮತ್ತು ಸಂಯಮದಿಂದ ವರ್ತಿಸುವಂತೆ ವಿನಂತಿಸುತ್ತಿದ್ದೇನೆ. ಇತರರಿಗೆ ತೊಂದರೆಯಾಗುವಂತೆ ಏನನ್ನೂ ಮಾಡಬೇಡಿ. ಇನ್ನೂ ಎರಡು ಮೂರು ದಿನಗಳಲ್ಲಿ ನನ್ನ ಕೆಲಸಕ್ಕೆ ಮರಳಬಹುದು ಎಂದು ಆಶಿಸುತ್ತೇನೆ. ಕೆಲಸ ಮಾಡಲು ಸ್ವಲ್ಪ ಸಮಸ್ಯೆ ಇದ್ದರೂ ಅದನ್ನು ನಾನು ನಿಭಾಯಿಸುತ್ತೇವೆ. ಯಾವುದೆ ಸಭೆಗಳನ್ನು ರದ್ದು ಮಾಡುವುದಿಲ್ಲ. ಆದರೆ ಬಹುಶಃ ನಾನು ಸ್ವಲ್ಪ ಸಮಯದವರೆಗೆ ಗಾಲಿಕುರ್ಚಿಯಲ್ಲಿ ಉಳಿಯಬೇಕಾಗುತ್ತದೆ. ದಯವಿಟ್ಟು ನನ್ನೊಂದಿಗೆ ಸಹಕರಿಸಿ” ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.