ನವದೆಹಲಿ: ಪ್ರಧಾನಿ ಮೋದಿ ಅವರ ತಿಂಗಳ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನ 80 ನೇ ಅವತರಣಿಕೆ ಇಂದು ನಡೆಯಿತು. ಕಾರ್ಯಕ್ರಮದಲ್ಲಿ ಭಾರತೀಯರನ್ನುದ್ದೇಶಿಸಿ ಮಾತನಾಡಿದ ಅವರು, ಈ ಸಂದರ್ಭದಲ್ಲಿ ಭಾರತೀಯ ಯುವಶಕ್ತಿಯನ್ನು ಶ್ಲಾಘಿಸಿದರು.
ಭಾರತೀಯ ಯುವ ಸಮೂಹ ಗುಣಮಟ್ಟಕ್ಕೆ ಹೆಚ್ಚು ಪ್ರಾಶಸ್ತ್ಯ ನೀಡುತ್ತಿದ್ದಾರೆ. ಈ ಹಿಂದಿನ ಪೂರ್ವ ನಿರ್ಧರಿತ ಹಾದಿಯಲ್ಲಿಯೇ ನಡೆಯಲು ಇಂದಿನ ಯುವಜನರು ಬಯಸುತ್ತಿಲ್ಲ. ಬದಲಾಗಿ ಅವರ ಗುರಿ ಹೊಸದು, ಆ ಗುರಿಯನ್ನು ತಲುಪುವ ಹೊಸ ಹಾದಿಯನ್ನು ಅವರು ಕಂಡುಕೊಳ್ಳುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಹಾಗೆಯೇ ಭಾರತೀಯ ಯುವ ಸಮೂಹ ಹೊಸ ಗುರಿಯನ್ನು ತಮ್ಮ ದೃಢ ಸಂಕಲ್ಪವನ್ನಾಗಿ ಮಾಡಿ, ಅದರ ಸಾಧನೆಗೆ ಹಗಲಿರುಳು ಎನ್ನದೆ ಶ್ರಮಿಸುತ್ತಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಕ್ರೀಡಾ ವಲಯಕ್ಕೆ ಸಂಬಂಧಿಸಿದಂತೆಯೂ ನಮ್ಮ ಯುವ ಸಮುದಾಯದಲ್ಲಿ ಮಹತ್ವದ ಬದಲಾವಣೆ ಕಾಣುತ್ತಿದೆ. ಯುವ ಜನರ ಮನಸ್ಸು ವಿಕಾಸವಾಗುತ್ತಿದ್ದು, ಹಳೆಯ ವಿಧಾನಗಳಿಂದ ಹೊಸ ಬದಲಾವಣೆಗಳ, ಹೊಸ ಕ್ರಮಗಳತ್ತ ತೆರೆದುಕೊಳ್ಳುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ. ಇಂದಿನ ಯುವ ಜನತೆ ವಿಭಿನ್ನತೆಯನ್ನು ಬಯಸುತ್ತಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಭಾರತೀಯರು ಖಾದಿ ವಸ್ತುಗಳ ಖರೀದಿಗೆ ಹೆಚ್ಚು ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಖಾದಿ ಖರೀದಿಸುವಂತೆ ಮನವಿ ಮಾಡಿದ್ದಾರೆ. ಇದರಿಂದ ಭಾರತ್ ಜೋಡೋ ಆಂದೋಲನಕ್ಕೆ ಪ್ರೋತ್ಸಾಹ ದೊರೆಯಲಿದೆ ಎಂದು ಹೇಳಿದ್ದಾರೆ. ಹಾಗೆಯೇ ಬಾಹ್ಯಾಕಾಶ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತದ ಸುಧಾರಣೆಗಳು, ಯುವಕರ ಕಲ್ಪನೆಗಳನ್ನು ಸಹ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡಿದ್ದಾರೆ. ಹಾಗೆಯೇ ಭಾರತದ ಮಹತ್ವದ ಪಾರಂಪರಿಕ ಸಂಪ್ರದಾಯಗಳನ್ನು ಮುಂದುವರೆಸುವಂತೆಯೂ ಅವರು ಜನರಿಗೆ ಮನವಿ ಮಾಡಿದರು.