ಬಂಟ್ವಾಳ: ಕೇರಳದ ಅಂತರ್ರಾಜ್ಯ ಕಳ್ಳರ ತಂಡ ಮನೆಗಳಿಗೆ ನುಗ್ಗಿ ಚಿನ್ನಾಭರಣಕ್ಕಾಗಿ ಕಪಾಟುಗಳ ಮುರಿದು ಜಾಲಾಡಿದ ಘಟನೆ ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿ ನಡೆದಿದ್ದು, ಸ್ಥಳೀಯರು ಕಾರ್ಯಾಚರಣೆ ನಡೆಸಿ ಓರ್ವ ಕಳ್ಳನನ್ನು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣಾ ವ್ಯಾಪ್ತಿಯ ಮಂಚಿ ಗ್ರಾಮದ ಕಾಡಂಗಡಿ ಎಂಬಲ್ಲಿನ ಮೂರು ಮನೆಗಳಿಗೆ ಕೇರಳದ ಅಂತರ್ರಾಜ್ಯ ಕಳ್ಳರ ತಂಡ ನುಗ್ಗಿದ್ದು ಚಿನ್ನಾಭರಣಕ್ಕಾಗಿ ಕಪಾಟುಗಳ ಮುರಿದು ಜಾಲಾಡಿದ್ದಾರೆ. ಈ ವೇಳೆ ಕಪಾಟಿನಲ್ಲಿ ಸಿಕ್ಕಿದ ಆಭರಣಗಳನ್ನು ಪರೀಕ್ಷಿಸಿದ ಕಳ್ಳರು ಅದೆಲ್ಲವೂ ನಕಲಿ ಎಂಬುದನ್ನು ಖಾತ್ರಿ ಮಾಡಿದ ಬಳಿಕ ಎಸೆದುಹೋಗಿದ್ದಾರೆ. ಕಾರು ಮತ್ತು ಬೈಕಿನಲ್ಲಿ ಹಗಲು ಹೊತ್ತಿನಲ್ಲಿ ಸುತ್ತಾಡುತ್ತಾ ಮನೆಗಳ ಆಯ್ಕೆ ಮಾಡುವ ನಟೋರಿಯಸ್ ಗ್ಯಾಂಗ್ರಾ ತ್ರಿ ಹೊತ್ತು ಮಾರಕಾಸ್ತ್ರಗಳೊಂದಿಗೆ ಮನೆಗೆ ನುಗ್ಗಿ ದುಷ್ಕೃತ್ಯ ಎಸಗುತ್ತಿದ್ದಾರೆ.
ಬೈಕ್ ಮತ್ತು ಕಾರುಗಳಲ್ಲಿ ಹತ್ತಕ್ಕೂ ಹೆಚ್ಚು ನಂಬರ್ ಪ್ಲೇಟ್ ಪತ್ತೆಯಾಗಿದ್ದು, ಮಂಚಿ ಪರಿಸರದ ನಾಗರಿಕರು ರಾತ್ರೋರಾತ್ರಿ ಕಾರ್ಯಾಚರಣೆ ನಡೆಸಿ ಖದೀಮರ ತಂಡದ ಓರ್ವನನ್ನು ಬೆನ್ನಟ್ಟಿ ಹಿಡಿದು ಮನಬಂದಂತೆ ಥಳಿಸಿ ಬಾಯ್ಬಿಡಿಸಿದ್ದಾರೆ. ಆ ಸಂದರ್ಭ ಸಿಕ್ಕಿಬಿದ್ದಿದ್ದ ಕೇರಳದ ಪೆರ್ಲ ಪರಿಸರದ ಓರ್ವ ಖದೀಮ “ನನ್ನ ಮೇಲೆ ಇಪ್ಪತ್ತಕ್ಕೂ ಹೆಚ್ಚು ಕಳ್ಳತನ ಕೇಸುಗಳಿವೆ ಎಂಬುದನ್ನು ಒಪ್ಪಿಕೊಂಡಿದ್ದಾನೆ. ಬೈಕ್ ಸಹಿತ ಸಿಕ್ಕಿಬಿದ್ದ ಕಳ್ಳನಿಗೆ ಒದೆನೀಡಿದ ಬಳಿಕ ಸ್ಥಳೀಯರು ಬಂಟ್ವಾಳ ಗ್ರಾಮಾಂತರ ಪೊಲೀಸರ ವಶಕ್ಕೆ ನೀಡಿದ್ದಾರೆ. ಉಳಿದ ನಾಲ್ವರು ಪರಾರಿಯಾಗಿದ್ದಾರೆ. ಪೊಲೀಸರು ಇನ್ನಾದರೂ ಆತನ ಗ್ಯಾಂಗಿನ ಇತರ ಸದಸ್ಯರನ್ನು ಪತ್ತೆಹಚ್ಚುವ ಮೂಲಕ ಸಾರ್ವಜನಿಕರ ನೆಮ್ಮದಿಯ ಜೀವನಕ್ಕೆ ಕೈಜೋಡಿಸಬೇಕಾಗಿದೆ.