ಮಂಡ್ಯ: ಪೋಷಕರ ಕಿರುಕುಳಕ್ಕೆ ನೊಂದು ಯುವಕನೊಬ್ಬ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾದ ಘಟನೆ ಮಂಡ್ಯ ಜಿಲ್ಲೆ ನಾಗಮಂಗಲದ ನಾಗತಿಹಳ್ಳಿಯಲ್ಲಿ ನಡೆದಿದೆ. ಆತ್ಮಹತ್ಯೆಗೆ ಶರಣಾದ ವ್ಯಕ್ತಿ ಗಿರೀಶ್(32) ಎನ್ನಲಾಗಿದೆ.
ಹೆತ್ತ ತಂದೆ-ತಾಯಿಯೇ ಸ್ವಂತ ಮಗ-ಸೊಸೆಯನ್ನು ಮಕ್ಕಳಿಲ್ಲ ಎಂಬ ಕಾರಣಕ್ಕೆ ಮನೆಯಿಂದ ಹೊರಹಾಕಿ, ಕೊಟ್ಟಿಗೆಗೆ ದಬ್ಬಿ ಕಿರುಕುಳ ನೀಡಿದ್ದಾರೆ. ಇದರಿಂದಾಗಿ ಮನನೊಂದ ಗಿರೀಶ್ ಡೆತ್ ನೋಟ್ ಬರೆದಿಟ್ಟು ಕೊಟ್ಟಿಗೆಯಲ್ಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ.
ತಂದೆ ರಾಜು ಸರ್ಕಾರಿ ಶಾಲೆಯ ನಿವೃತ್ತ ಶಿಕ್ಷಕ. ತಾಯಿ ದೇವಮಣಿ ಕೂಡ ಸರ್ಕಾರಿ ಶಾಲೆ ಶಿಕ್ಷಕಿ. ನನಗೆ ಮದುವೆಯಾಗಿ 11 ವರ್ಷಗಳಾದರೂ ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ತಂದೆ-ತಾಯಿ ನನಗೆ ಹಾಗೂ ನನ್ನ ಪತ್ನಿಗೆ ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು. ಪ್ರತಿದಿನ ವ್ಯಂಗ್ಯ ಮಾಡುವುದು, ಹಿಂಸೆ ಕೊಡುವುದು ಮಾಡುತ್ತಿದ್ದರು. ಕೊನೆಗೆ ನಮ್ಮನ್ನು ಮನೆಯಿಂದ ಹೊರಹಾಕಿ ಕೊಟ್ಟಿಗೆಯಲ್ಲಿಟ್ಟಿದ್ದರು. ಆಸ್ತಿಯನ್ನೂ ಕೊಡದೇ ಜೀವನೋಪಾಯಕ್ಕೆಂದು ಇಟ್ಟುಕೊಂಡಿದ್ದ ಒಂದು ಟ್ರ್ಯಾಕ್ಟರ್ ನ್ನು ಕೂಡ ಕಸಿದುಕೊಂಡಿದ್ದರು.
ಜಮೀನು, ಮನೆ, ಆಸ್ತಿ, ದುಡಿಯಲು ಟ್ರ್ಯಾಕ್ಟರ್ ಕೂಡ ಇಲ್ಲದೆ ಸಂಕಷ್ಟಕ್ಕೀಡಾಗಿದ್ದ ಗಿರೀಶ್ ದಂಪತಿ ಕೊಟ್ಟಿಗೆಯಲ್ಲಿಯೇ ವಾಸವಾಗಿದ್ದರು. ಇದೆಲ್ಲದರಿಂದ ಮನನೊಂದು ತನ್ನ ಸಾವಿಗೆ ತಂದೆ-ತಾಯಿಯೇ ಕಾರಣ ಎಂದು ಡೆತ್ ನೋಟ್ ಬರೆದಿಟ್ಟು, ಜೊತೆಗೆ ಕೊಟ್ಟಿಗೆಯ ಗೋಡೆಯ ಮೇಲೆಯೂ ನನ್ನ ಸಾವಿಗೆ ಹೆತ್ತ ಅಪ್ಪ-ಅಮ್ಮನೇ ಕಾರಣ ಎಂದು ಬರೆದು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಂತೆ ತಂದೆ-ತಾಯಿ ತಲೆಮರೆಸಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಬಿಂಡಿಗನವಿಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.