





ಸುರತ್ಕಲ್: ಕೇರಳ ಮೂಲದ ಉದ್ಯಮಿಯೊಬ್ಬರ ಕಾರನ್ನು ಅಡ್ಡಗಟ್ಟಿ ಸಿನಿಮೀಯ ಮಾದರಿಯಲ್ಲಿ ಕಾರು ಸಹಿತ ಚಿನ್ನಾಭರಣ ದೋಚಿದ ಘಟನೆ ಸೋಮವಾರ(ಜೂ.29) ಬೆಳಗ್ಗಿನ ಜಾವ 2:15ರ ಸುಮಾರಿಗೆ ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿಯಲ್ಲಿ ನಡೆದಿದೆ.
ಮೂಲತಃ ಮಹಾರಾಷ್ಟ್ರ ನಿವಾಸಿ ಕಳೆದ 12 ವರ್ಷಗಳಿಂದ ಕೇರಳದ ಪಯ್ಯನ್ನೂರಿನಲ್ಲಿ ವಾಸವಿರುವ ವಿಕಾಸ್ ಸುಬ್ಬರಾವ್ ಧನವಾಡೆ(44), ಅವರ ಪತ್ನಿ ರೂಪಾಲಿ(38), ಪುತ್ರ ವಿಫುಲ್ (14) ಕಾರಿನಲ್ಲಿದ್ದು, ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಭಾಗವಹಿಸಿ ಕೇರಳದ ಪಯ್ಯನ್ನೂರಿಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ.
ಬೆಳಗ್ಗಿನ ಜಾವ 2:15ರ ಸುಮಾರಿಗೆ ಇವರು ಸಂಚರಿಸುತ್ತಿದ್ದ ಕಾರು ಸುರತ್ಕಲ್ ಪೊಲೀಸ್ ಠಾಣಾ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ 66ರ ಬೈಕಂಪಾಡಿ ದ್ವಾರಾ ಹೋಟೆಲ್ ಮುಂಭಾಗ ತಲುಪಿದಾಗ ಮೂರು ಕಾರುಗಳು ಅವ ರನ್ನು ಅಡ್ಡಗಟ್ಟಿವೆ. ಆ ಕಾರುಗಳಲ್ಲಿದ್ದ ಸುಮಾರು ಏಳು ಮಂದಿ ಮುಸುಕುಧಾರಿಗಳು ಮಾರಕಾಯುಧ ಗಳೊಂದಿಗೆ ಆಗಮಿಸಿ ವಿಕಾಸ್ರಿಗೆ ಹಲ್ಲೆ ನಡೆಸಿದ್ದಾರೆ.
ಬಳಿಕ ಅವರನ್ನು ಕಾರಿನಿಂದ ಎಳೆದು ಹೊರಗೆ ಹಾಕಿ ಅವರ ಪತ್ನಿ ಮತ್ತು ಮಗನನ್ನು ಕಾರು ಸಮೇತ ಅಪಹರಿಸಿದ್ದಾರೆ. ರೂಪಾಲಿಯ ಬ್ಯಾಗ್ನಲ್ಲಿದ್ದ 180 ಗ್ರಾಂ ಚಿನ್ನಾಭರಣ, ಮೊಬೈಲ್ ಫೋನ್ನ್ನು ಕಸಿದ ದರೋಡೆಕೋರರು, ಪಣಂಬೂರು ಪೊಲೀಸ್ ಠಾಣಾ ವ್ಯಾಪ್ತಿಯ ಬೀಚ್ ರಸ್ತೆ ಬಳಿಯ ಹೆದ್ದಾರಿ ಯಲ್ಲಿ ತಾಯಿ-ಮಗನನ್ನು ತೊರೆದು ಕಾರು ಸಮೇತ ಪರಾರಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮಾಹಿತಿ ತಿಳಿದಾಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು, ಉದ್ಯಮಿ ವಿಕಾಸ್, ಅವರ ಪತ್ನಿ ಮತ್ತು ಮಗನನ್ನು ರಕ್ಷಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಘಟನೆಯ ಬಗ್ಗೆ ವಿಕಾಸ್ ನೀಡಿರುವ ದೂರಿನಂತೆ ಪಣಂಬೂರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ.
ದರೋಡೆ ಪ್ರಕರಣದ ತನಿಖಾಧಿಕಾರಿಯಾಗಿರುವ ಪಣಂಬೂರು ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕ ಸಲೀಂ ಅಬ್ಬಾಸ್ ನೇತೃತ್ವದಲ್ಲಿ ಸೋಮವಾರ ಮಧ್ಯಾಹ್ನ ರಾಷ್ಟ್ರೀಯ ಹೆದ್ದಾರಿಯಲ್ಲೇ ಸ್ಥಳ ಮಹಜರು ನಡೆಸಲಾಯಿತು. ಉದ್ಯಮಿ ವಿಕಾಸ್ ಮತ್ತು ಅವರ ಪತ್ನಿಯನ್ನು ಸ್ಥಳಕ್ಕೆ ಕರೆಸಿ ಮಾಹಿತಿ ಕಲೆ ಹಾಕಿದರು.
ದುಷ್ಕರ್ಮಿಗಳು ಉದ್ಯಮಿ ವಿಕಾಸ್ರ ದರೋಡೆ ಕೃತ್ಯಕ್ಕೆ ಕೇರಳ ನೋಂದಣಿಯ ಎರಡು ಮತ್ತು ಬೆಂಗಳೂರು ನೋಂದಣಿಯ ಕಾರೊಂದನ್ನು ಬಳಸಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಈ ನಿಟ್ಟಿನಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ತನಿಖೆಗೆ ತಂಡಗಳ ರಚನೆ
ದರೋಡೆ ಪ್ರಕರಣಕ್ಕೆ ಸಂಬಂಧಿಸಿ ವಿಕಾಸ್ ನೀಡಿರುವ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಘಟನಾ ಸ್ಥಳದಲ್ಲಿದ್ದ ಹೋಟೆಲ್, ಅಂಗಡಿಗಳ ಸಿಸಿಟಿವಿ ಕ್ಯಾಮರಾಗಳ ದೃಶ್ಯಾವಳಿಗಳನ್ನು ಕಲೆ ಹಾಕಿದ್ದಾರೆ. ಜೊತೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೊಲೀಸ್ ಇಲಾಖೆಯಿಂದ ಅಳವಡಿಸಲಾಗಿರುವ ಸಿಟಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಿ ದರೋಡೆಕೋರರು ಕೃತ್ಯಕ್ಕೆ ಬಳಸಿರುವ ಕಾರುಗಳ ಗುರುತು ಪತ್ತೆಹಚ್ಚಿದ್ದಾರೆ.
ಪ್ರಕರಣದ ತನಿಖೆ ವಿಕಾಸ್ರ ವ್ಯಾಪಾರ ಸಂಬಂಧ ಹಾಗೂ ಅವರ ಆಪ್ತ ವಲಯದ ಮೇಲಿನ ಶಂಕೆಯ ದಾರಿಯಾಗಿ ಮುಂದೆ ಸಾಗುತ್ತಿದೆ. ಪ್ರಕರಣ ಭೇದಿಸಲು ಮಂಗಳೂರು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿಯವರ ಸೂಚನೆಯ ಮೇರೆಗೆ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿರುವುದಾಗಿ ತಿಳಿದುಬಂದಿದೆ.








