ಮಂಗಳೂರು: ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಕೆಎಸ್ಆರ್ಟಿಸಿ ಸಿಬ್ಬಂದಿ ನಡೆಸುತ್ತಿರುವ ಮುಷ್ಕರದ ಹಿನ್ನೆಲೆಯಲ್ಲಿ ಮಂಗಳೂರಿನಲ್ಲಿ 2ನೆ ದಿನವೂ ಬೆರಳೆಣಿಕೆಯ ಬಸ್ಗಳ ಸಂಚಾರ ಹೊರತುಪಡಿಸಿ ಕೆಎಸ್ಆರ್ಟಿಸಿ ಸ್ತಬ್ಧವಾಗಿದೆ.
ಚಾಲಕರು ಹಾಗೂ ನಿರ್ವಾಹಕರು ಇಂದು ಕೂಡಾ ಕರ್ತವ್ಯಕ್ಕೆ ಹಾಜರಾಗದೆ ಮುಷ್ಕರದಲ್ಲಿ ಪಾಲ್ಗೊಂಡಿದ್ದಾರೆ. ಹಾಗಿದ್ದರೂ, ಕೆಲ ನೌಕರರನ್ನು ಒತ್ತಾಯಪೂರ್ವಕವಾಗಿ ಕರೆಸಿಕೊಂಡು ಮೈಸೂರು, ಧರ್ಮಸ್ಥಳ, ಬೆಂಗಳೂರು, ಮಡಿಕೇರಿ ಹಾಗೂ ಹಾಸನಕ್ಕೆ ಬಸ್ಗಳನ್ನು ಕಳುಹಿಸಲಾಗಿದೆ. ಬಸ್ಗಳಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಕಂಡು ಬಂದಿದ್ದು, ಸಿಬ್ಬಂದಿಯನ್ನು ನೋಟೀಸು ನೀಡಿ ಕರೆಸಲಾಗಿದೆ ಎಂಬ ಆರೋಪವೂ ವ್ಯಕ್ತವಾಗಿದೆ.
ಕೆಎಸ್ಆರ್ಟಿಸಿಯ ಮಂಗಳೂರಿನ ಮೂರನೆ ಡಿಪೋದ ಕೆಲ ಸಿಬ್ಬಂದಿಗೆ ನೋಟೀಸು ನೀಡಿ ಕರ್ತವ್ಯಕ್ಕೆ ಹಾಜರಾಗುವಂತೆ ಒತ್ತಾಯಿಸಲಾಗಿದೆ. ಬಸ್ಗಳನ್ನು ಅನಧಿಕೃತಾಗಿ ಇರಿಸಿಕೊಂಡ ನೆಪದಲ್ಲಿ 44 ಸಿಬ್ಬಂದಿಗೆ ನೋಟೀಸು ನೀಡಲಾಗಿದೆ ಎಂಬ ಆರೋಪ ವ್ಯಕ್ತವಾಗಿದೆ.
ಇಂದು ಕೂಡಾ ಕೆಎಸ್ಆರ್ಟಿಸಿ ಬಸ್ಗಳ ಜಾಗದಲ್ಲಿ ಖಾಸಗಿ ಬಸ್ಗಳು ಸಂಚಾರ ನಡೆಸುತ್ತಿದ್ದು, ಬೆಂಗಳೂರು, ಸಕಲೇಶಪುರ, ಹಾಸನ, ಮಡಿಕೇರಿ, ಮೈಸೂರು ಕಡೆಗಳಿಗೆ ಖಾಸಗಿ ಬಸ್ಗಳು ಸೇವೆ ನೀಡುತ್ತಿವೆ.