ಮಂಗಳೂರು: ಶ್ಯಾಮಲಾ ಎಂಬವರ ಮನೆಗೆ ಬೆಂಕಿ ತಗುಲಿ ಮನೆ ಸಂಪೂರ್ಣ ಸುಟ್ಟು ಹೋದ ಘಟನೆ ಮಂಗಳೂರಿನ ಸಸಿಹಿತ್ಲು ಬೀಚ್ ಬಳಿಯ ದಾಂಡಿ ಎಂಬಲ್ಲಿ ನಡೆದಿದೆ.
ಮನೆಯಲ್ಲಿ ಶ್ಯಾಮಲಾ ಮತ್ತು ಅವರ ಪುತ್ರ ಮಾತ್ರ ವಾಸಿಸುತ್ತಿದ್ದು, ಇಬ್ಬರೂ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ ಆಗ್ನಿ ದುರಂತ ನಡೆದಿದೆ. ಬೆಂಕಿ ತಗುಲಿದ್ದನ್ನು ಗಮನಿಸಿದ ಸ್ಥಳೀಯರು ಬೆಂಕಿ ನಂದಿಸಲು ಪ್ರಯತ್ನಿಸಿದ್ದಾರೆ. ಅಗ್ನಿಶಾಮಕ ದಳದವರಿಗೂ ಮಾಹಿತಿ ನೀಡಿದ್ದು, ಬಳಿಕ ಅವರೂ ಬಂದಿದ್ದಾರೆ. ಕ್ಯಾಟರಿಂಗ್ ಸಂಸ್ಥೆಯ 4 ಟ್ಯಾಂಕ್ ನೀರನ್ನು ತರಿಸಿ ಬೆಂಕಿಯನ್ನು ನಂದಿಸಲು ಪ್ರಯತ್ನಿಸಲಾಗಿದೆ. ಆದರೆ ಅಷ್ಟರಲ್ಲಿ ಮನೆ ಸಂಪೂರ್ಣ ಸುಟ್ಟು ಭಸ್ಮವಾಗಿತ್ತು.
ಗ್ಯಾಸ್ ಸಂಪರ್ಕವನ್ನು ತೆಗೆದು ಹೊರಗೆ ಇರಿಸಿದ್ದರಿಂದ ಭಾರೀ ದುರಂತ ತಪ್ಪಿದೆ. ಬಟ್ಟೆ ಬರೆಗಳೆಲ್ಲ ಸುಟ್ಟು ಹೋಗಿವೆ. ಕಪಾಟಿನಲ್ಲಿದ್ದ 20 ಸಾವಿರ ರೂಪಾಯಿ ನಗದು ಮತ್ತು ಒಂದು ಲಕ್ಷ ರೂಪಾಯಿ ಅಂದಾಜು ಬೆಲೆಯ ಚಿನ್ನಾಭರಣ ಬೆಂಕಿಗೆ ಆಹುತಿಯಾಗಿದೆ ಎಂದು ಶ್ಯಾಮಲಾ ಅವರು ತಿಳಿಸಿದ್ದಾರೆ. ಮಾಹಿತಿ ಲಭಿಸಿದ ಶಾಸಕರು ಸ್ಥಳಕ್ಕೆ ಭೇಟಿ ನೀಡಿ ಮನೆ ಮಂದಿಗೆ ತಾತ್ಕಾಲಿಕವಾಗಿ ಪಕ್ಕದ ಬಾಡಿಗೆ ಮನೆಯಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ ಮಾಡಿದ್ದಾರೆ.
ನಷ್ಟದ ಪ್ರಮಾಣ ಅಂದಾಜಿಸಿಲ್ಲ. ದೇವರ ದೀಪಕ್ಕೆ ಇರಿಸಿದ್ದ ಹಣತೆಯನ್ನು ಇಲಿ ಮಗುಚಿ ಹಾಕಿದ ಪರಿಣಾಮ ಬೆಂಕಿ ಹಿಡಿದಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.