?️ ಆದರ್ಶ ಪರಕ್ಕಜೆ
ಮಂಗಳೂರಿಗೆ ಪ್ರಯಾಣಿಸುವಾಗ ಪ್ರತಿಯೊಬ್ಬರೂ ಸಹ ನೇತ್ರಾವತಿ ನದಿಯ ಇನ್ನೊಂದು ಬದಿಯಲ್ಲಿ ರುವ ಗುಡ್ಡದ ತುದಿಯ ಈ ದೇವಸ್ಥಾನವನ್ನು ನೋಡಿರುತ್ತಿರಾ..ಆದರೆ ಅಲ್ಲಿಗೆ ಯಾವತ್ತಾದರೂ ಭೇಟಿ ಕೊಟ್ಟಿದ್ದೀರಾ?? ಬಹುತೇಕ ಜನರಿಗೆ ಈ ದೇವಸ್ಥಾನದ ಹೆಸರು,ದಾರಿ ಎರಡೂ ಗೊತ್ತಿರ್ಲಿಕ್ಕಿಲ್ಲ.
ಇನೋಳಿಯು , ನೇತ್ರಾವತಿ ನದಿಯ ತಟದಲ್ಲಿರುವ ಒಂದು ಹಳ್ಳಿ.ಇನೋಳಿ ಗ್ರಾಮದ ಒಂದು ಗುಡ್ಡದ ತಪ್ಪಲಿನಲ್ಲಿ ಈ ದೇವಸ್ಥಾನ ಸ್ಥಾಪಿತವಾಗಿದೆ.ಈ ಊರಿನ ಗ್ರಾಮ ದೇವಸ್ಥಾನ , ಶ್ರೀ ಸೋಮನಾಥೇಶ್ವರ ದೇವಸ್ಥಾನ ಇದೊಂದು ಐತಿಹಾಸಿಕ ಹಾಗು ಪ್ರೇಕ್ಷಣೀಯ ಸ್ಥಳ.ಈ ದೇವಸ್ಥಾನಕ್ಕೆ ಸುಮಾರು 3000 ವರ್ಷಗಳ ಇತಿಹಾಸವಿದೆ.
ಮಂಗಳೂರಿನಿಂದ 28 ಕಿ.ಮೀ ಹಾಗೂ ಮುಡಿಪುವಿನಿಂದ 12 ಕಿ.ಮೀ ದೂರದಲ್ಲಿದೆ.ದೇವಸ್ಥಾನದವರೆಗೂ ರಸ್ತೆ ಇದೆ.ಕಾರು,ಬೈಕ್ ಗಳಲ್ಲಿಯೂ ನೀವಿಲ್ಲಿಗೆ ಬರಬಹುದು.ಫರಂಗಿಪೇಟೆಯಿಂದ ದೋಣಿಯ ಮೂಲಕ ನೇತ್ರಾವತಿ ನದಿ ದಾಟಿ ಇನೋಳಿ ಗ್ರಾಮ ಸೇರಬಹುದು.ಅಲ್ಲಿಂದ ಗುಡ್ಡದ ತಪ್ಪಲಿಗೆ ಸ್ವಲ್ಪ ಹೊತ್ತು ನಡೆದುಕೊಂಡು ಹೋಗಬೇಕು.
ಮಂಗಳೂರಿನಿಂದ ಬರುವವರು ಉಳ್ಳಾಲ ಸೇತುವೆಯಿಂದ ಸ್ವಲ್ಪ ಮುಂದೆ ಎಡಭಾಗಕ್ಕೆ ತಿರುಗಿ ಎಲ್ಯಾರುಪದವು-ಇನೋಳಿ ರಸ್ತೆ ಮೂಲಕ ಸಾಗಬೇಕು.ಮುಡಿಪುವಿನಿಂದ ಬರುವವರು ಕೊಣಾಜೆ – ಪಜೀರು ಮಾರ್ಗವಾಗಿ ಬರಬಹುದು.ಪಜೀರಿನಿಂದ ಇನೋಳಿಯತ್ತ ಹೋಗುವಾಗ ಬಲಬದಿಗೆ ದೇವಸ್ಥಾನದ ದ್ವಾರ ಸಿಗುತ್ತದೆ. ಆ ದಾರಿಯಲ್ಲಿ ಸ್ವಲ್ಪ ಮುಂದೆ ಸಾಗಿದರೆ ದೇವಸ್ಥಾನ ಬಂದು ತಲುಪುತ್ತೀರಿ. ಮಂಗಳೂರು ಹಾಗು ಮುಡಿಪುವಿನಿಂದ ಇನೋಳಿಗೆ ನಿರಂತರ ಬಸ್ ಸೌಲಭ್ಯವಿದೆ.ದೇವಸ್ಥಾನದ ಮುಂದೆ ವಿಶಾಲವಾದ ಮೈದಾನ,ಹೂವಿನ ಕೈತೋಟವಿದೆ.ಹಾಗೂ ಬೃಹದಾಕಾರದ ‘ಘಂಟೆ’ ಇದೆ. ದೇವಸ್ಥಾನದ ಮೂರೂ ದಿಕ್ಕಿನಲ್ಲಿ ಮೈದುಂಬಿ ಹರಿಯುವ ನೇತ್ರಾವತಿ ನದಿಯು ಕಣ್ಣು ತುಂಬುತ್ತದೆ. ದೇವಸ್ಥಾನವು ಕಳೆದ ಕೆಲವು ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿದೆ.
ದೇವಸ್ಥಾನದ ಒಳಗೆ ವಿಶಾಲವಾದ ಗರ್ಭಗುಡಿಯಿದೆ.ಗರ್ಭಗುಡಿಯ ಸುತ್ತ ಇರುವ ಕಲ್ಲಿನ ಕಂಬಗಳು ದೇವಸ್ಥಾನದ ಅಂದವನ್ನು ಹೆಚ್ಚಿಸುತ್ತದೆ .ಪ್ರತಿದಿನ ಬೆಳಗ್ಗೆ 6 ರಿಂದ ಮಧ್ಯಾಹ್ನ 1 ಗಂಟೆವರೆಗೆ ದೇವಸ್ಥಾನ ತೆರೆದಿರುತ್ತದೆ. ಸೋಮವಾರ ಮಾತ್ರ ಸಂಜೆ 5 ರಿಂದ 7.30 ತನಕ ತೆರೆದಿರುತ್ತದೆ.ಪ್ರತಿದಿನ ಮಧ್ಯಾಹ್ನ ಇಲ್ಲಿ ಊಟದ ವ್ಯವಸ್ಥೆ ಇದೆ.ಜನಜಂಗುಳಿ ಇಲ್ಲದ ಪ್ರಶಾಂತವಾದ ಪ್ರದೇಶ.
ಇಲ್ಲಿನ ಪ್ರಾಕೃತಿಕ ಸೌಂದರ್ಯ ಮನಸ್ಸಿಗೆ ಮುದ ನೀಡುತ್ತದೆ.ದೇವಾಲಯದ ಸುತ್ತ ವಾಯುವಿಹಾರ ನಡೆಸುತ್ತಾ
ಪ್ರಕೃತಿಯ ಸೌಂದರ್ಯವನ್ನು ಆಸ್ವಾದಿಸಬಹುದು.ಈ ಗುಡ್ಡದ ತಪ್ಪಲಿನಿಂದ ಸುತ್ತ ನೋಡಿದರೆ SRINIVAS, EXPERT ವಿದ್ಯಾಸಂಸ್ಥೆಗಳು, ಫರಂಗಿಪೇಟೆ , ಪಶ್ಚಿಮ ಘಟ್ಟದ ಅನೇಕ ಗುಡ್ಡ ಬೆಟ್ಟಗಳು ಹಾಗೂ ಇತರ ಊರುಗಳು ಕಾಣಸಿಗುತ್ತದೆ.ನವಿಲುಗಳು ಸ್ವಚ್ಛಂದವಾಗಿ ವಿಹರಿಸುತ್ತಿರುತ್ತದೆ.
ಸಂಜೆಯ ಹೊತ್ತನ್ನು ಕುಟುಂಬದವರೊಂದಿಗೆ ಹಾಗೂ ಸ್ನೇಹಿತರೊಂದಿಗೆ ಕಳೆಯಲು ಇದೊಂದು ಉತ್ತಮವಾದ ಸ್ಥಳ.Photoshoot ಗೂ ಸಹ ಸೂಕ್ತವಾದ ಜಾಗ.ಇಲ್ಲಿನ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ಕಾರಣ ಹೊರಗಿನ ಜನರು ಇಲ್ಲಿಗೆ ಆಗಮಿಸುವುದು ಬಹಳ ವಿರಳ.ದಕ್ಷಿಣ ಕನ್ನಡದಲ್ಲಿ ಇಂತಹ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ನಮ್ಮ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಸಾಕಷ್ಟು ಅವಕಾಶಗಳಿದೆ. ಸರಕಾರವು ಇಂತಹ ತಾಣಗಳನ್ನು ಗುರುತಿಸಿ ಪ್ರವಾಸಿ ಸ್ಥಳಗಳಾಗಿ ಅಭಿವೃದ್ಧಿಪಡಿಸಬೇಕು.ನಿಮ್ಮ ಊರಿನಲ್ಲಿ ಯಾರಿಗೂ ಗೊತ್ತಿರದ ಪ್ರೇಕ್ಷಣೀಯ ಸ್ಥಳಗಳಿದ್ದರೆ
ಅವುಗಳಿಗೆ ಹೆಚ್ಚೆಚ್ಚು ಪ್ರಚಾರ ಕೊಡಿ.ಜನರಿಗೆ ಇಂತಹ ಸ್ಥಳೀಯ ತಾಣಗಳಿಗೆ ಭೇಟಿ ನೀಡುವಂತೆ ಪ್ರೇರೇಪಿಸಿ.ನಮ್ಮ LOCAL ಸ್ಥಳಗಳನ್ನು GLOBAL ಮಾಡೋಣ.
?️ ಆದರ್ಶ ಪರಕ್ಕಜೆ