ಮಂಗಳೂರು: ಕೇರಳ ಮೂಲದ ವ್ಯಕ್ತಿಯೊಬ್ಬ ಮತಾಂತರ ಮಾಡುವ ಪುಸ್ತಕಗಳನ್ನು ಸಾರ್ವಜನಿಕರಿಗೆ ಹಂಚುತ್ತಿದ್ದಾನೆಂದು ಆರೋಪಿಸಿ ಬಜರಂಗದಳ ಕಾರ್ಯಕರ್ತರು ಆತನನ್ನು ತಡೆಹಿಡಿದು ಪಾಂಡೇಶ್ವರ ಪೊಲೀಸ್ ಠಾಣೆಗೆ ಒಪ್ಪಿಸಿದ್ದಾರೆ.
ಪುಸ್ತಕ ಹಂಚುತ್ತಿದ್ದ ವ್ಯಕ್ತಿ ಕೇರಳ ಮೂಲದ ಕೊಟ್ಟಾಯಂ ನಿವಾಸಿ ರಾಜೇಯನ್ ಎನ್ನಲಾಗಿದೆ. ಆತ ಸ್ಥಳೀಯ ಶಾಲೆಯೊಂದರ ಬಳಿ ಬೈಬಲ್, ಮತ್ತು ಮಲಯಾಳಂ ಭಾಷೆಗೆ ಸಂಬಂಧಿಸಿದ ಪುಸ್ತಕಗಳನ್ನು ಸಾರ್ವಜನಿಕರಿಗೆ ಮಾರಾಟ ನಡೆಸುತ್ತಿದ್ದಾನೆ ಮತ್ತು ಮತಾಂತರದ ಆರೋಪ ಹೊರಿಸಿ ನಗರದ ಪಾಂಡೇಶ್ವರ ಬಳಿ ಬಜರಂಗದಳ ಕಾರ್ಯಕರ್ತರು ತಡೆಹಿಡಿದಿದ್ದಾರೆ ಎನ್ನಲಾಗಿದ್ದು ಬಳಿಕ ಪೊಲೀಸರ ವಶಕ್ಕೆ ನೀಡಿದ್ದಾರೆ.
ವ್ಯಕ್ತಿಯನ್ನು ಪೊಲೀಸರು ಪುಸ್ತಕಗಳ ಮಾರಾಟದ ಬಗ್ಗೆ ವಿಚಾರಿಸಿದಾಗ ಆತನು ತಾನು ಮಾನಸಿಕ ರೋಗದಿಂದ ಬಳಲುತ್ತಿರುವುದಾಗಿ, ಯಾರೋ ಒಬ್ಬರು ಉಚಿತವಾಗಿ ಪುಸ್ತಕಗಳನ್ನು ಹಂಚಿದರೆ ಕಾಯಿಲೆಯು ಗುಣವಾಗುತ್ತದೆ ಎಂದು ತಿಳಿಸಿದ್ದರು. ಆದ್ದರಿಂದ ನಾನು ಬೈಬಲ್ ಗ್ರಂಥ ಹಾಗೂ ಇತರ ಮಲಯಾಳಂ ಭಾಷೆಯ ಪುಸ್ತಕಗಳನ್ನು ಉಚಿತವಾಗಿ ಸಾರ್ವಜನಿಕರಿಗೆ ನೀಡುತ್ತಿದ್ದೇನೆಂದು ಹೇಳಿದ್ದಾನೆ. ಆ ಬಳಿಕ ಪೊಲೀಸರು ವಾಪಾಸ್ಸು ಕೇರಳಕ್ಕೆ ಹೋಗುವಂತೆ ಸೂಚನೆ ನೀಡಿ ಠಾಣೆಯಿಂದ ಕಳುಹಿಸಿದ್ದಾರೆ ಎನ್ನಲಾಗಿದೆ.