ಮಂಗಳೂರು: ನಗರದ ಪದವಿನಂಗಡಿ ಬಳಿ ರಸ್ತೆ ದಾಟುತ್ತಿದ್ದ ಸ್ಕೂಟರ್ ವೊಂದಕ್ಕೆ ಢಿಕ್ಕಿಯಾಗುವುದನ್ನು ತಪ್ಪಿಸುವ ಭರದಲ್ಲಿ ಬೈಕ್ ಚಾಲಕ ನಿಯಂತ್ರಣ ತಪ್ಪಿ ಅಪಘಾತಕ್ಕೀಡಾಗಿದ್ದರಿಂದ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ಇಂದು ಬೆಳಗ್ಗೆ ನಡೆದಿದೆ.
ಗಾಯಾಳುವನ್ನು ಯೆಯ್ಯಾಡಿ ಸಮೀಪದ ಶರಬತ್ತ್ ಕಟ್ಟೆ ನಿವಾಸಿ ಪ್ರಶಾಂತ್ (29) ಎಂದು ಗುರುತಿಸಲಾಗಿದೆ.
ಶುಕ್ರವಾರ ಬೆಳಗ್ಗೆ ಪ್ರಶಾಂತ್ ಪದವಿನಂಗಡಿಯಿಂದ ಯೆಯ್ಯಾಡಿ ಕಡೆಗೆ ಬರುತ್ತಿದ್ದಾಗ ಪೆರ್ಲಗುರಿ ಕ್ರಾಸ್ನಲ್ಲಿ ಸ್ಕೂಟರ್ ಸವಾರರೊಬ್ಬರು ರಸ್ತೆ ಕ್ರಾಸ್ ಮಾಡಿ ಮತ್ತೊಂದು ದಿಕ್ಕಿನತ್ತ ಚಲಿಸುತ್ತಿದ್ದರು. ಅಲ್ಲದೆ ಬೇರೊಂದು ಬೈಕ್ ಕೂಡಾ ಆ ಸ್ಕೂಟರ್ ಸಮೀಪ ಸಂಚರಿಸುತ್ತಿತ್ತು. ಈ ಸಂದರ್ಭದಲ್ಲಿ ಬೈಕಿನಲ್ಲಿ ವೇಗವಾಗಿ ಬರುತ್ತಿದ್ದ ಪ್ರಶಾಂತ್ ಆ ಎರಡೂ ದ್ವಿಚಕ್ರ ವಾಹನಗಳಿಗೆ ಢಿಕ್ಕಿ ಆಗುವುದನ್ನು ತಪ್ಪಿಸಿ ಮುಂದೆ ಸಾಗಿದ್ದಾರೆ. ಆದರೆ ಬೈಕ್ ಅವರ ನಿಯಂತ್ರಣ ತಪ್ಪಿ ರಸ್ತೆ ಬದಿಯ ಅಂಗಡಿಯ ಜಗಲಿ ಕಟ್ಟೆಗೆ ಢಿಕ್ಕಿಯಾಗಿದೆ. ಈ ವೇಳೆ ಪ್ರಶಾಂತ್ ಮೇಲಕ್ಕೆ ಚಿಮ್ಮಿ ಕಾಂಕ್ರಿಟ್ ರಸ್ತೆಗೆ ಬಿದ್ದಿದ್ದು, ಅಪಘಾತದ ರಭಸಕ್ಕೆ ಪ್ರಶಾಂತ್ ಧರಿಸಿದ ಹೆಲ್ಮೆಟ್ ಕೂಡಾ ಕಳಚಿ ಬಿದ್ದಿದ್ದು, ತಲೆಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ಸ್ಥಿತಿ ಗಂಭೀರವಾಗಿದ್ದು, ಅಸುನೀಗಿದ್ದಾರೆಂದು ತಿಳಿದುಬಂದಿದೆ.
ಈ ದೃಶ್ಯ ಸಿಸಿ ಕ್ಯಾಮರದಲ್ಲಿ ಸೆರೆಯಾಗಿದೆ. ಇದರ ಬಗ್ಗೆ ನಗರ ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.