


ಮಂಗಳೂರು: ಮಹಿಳಾ ಪೊಲಿಸ್ ಠಾಣೆಯಲ್ಲಿ ದಾಖಲಾಗಿದ್ದ ಪ್ರತ್ಯೇಕ 2 ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ ಆರೋಪಿಗಳನ್ನು ಹೊಯಿಗೆ ಬಜಾರ್, ಮಂಗಳೂರು ನಿವಾಸಿ ಪಿ.ದಾಮೋದರ (40) ಹಾಗೂ ಲಿಟಲ್ ಫ್ಲವರ್ ಅಪಾರ್ಟ್ಮೆಂಟ್ ಕಂಕನಾಡಿ, ಮಂಗಳೂರು ನಿವಾಸಿ ಉಬೇದುಲ್ಲಾ (39) ಎಂದು ಗುರುತಿಸಲಾಗಿದೆ.
ಮಾ.14-03-2011 ರಂದು ಮಂಗಳೂರು ನಗರದ ಹಂಪನ ಕಟ್ಟೆಯಲ್ಲಿರುವ ಧನ್ಯವಾದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ ನಡೆಸಿಕೊಂಡಿರುವ ಬಗ್ಗೆ ಅನೈತಿಕ ಚಟುವಟಿಕೆಯಲ್ಲಿ ತೊಡಗಿಕೊಂಡದ್ದನ್ನು ಪತ್ತೆ ಹಚ್ಚಿದ್ದು, ಈ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣಾ ಅ.ಕ್ರ 04/2011 ಕಲಂ 3(2)(ಎ) 5(ಡಿ),2 , 7 ಐ.ಟಿ.ಪಿ ಕಾಯ್ದೆ ರೀತ್ಯಾ ಪ್ರಕರಣವು ದಾಖಲಾಗಿತ್ತು. ಪ್ರಕರಣದಲ್ಲಿ ತನಿಖಾಧಿಕಾರಿಯವರು ತನಿಖೆಯನ್ನು ನಡೆಸಿ ಪ್ರಕರಣದಲ್ಲಿ 4 ಜನ ಆರೋಪಿತರ ವಿರುದ್ದ ದೋಷರೋಪಣಾ ಪತ್ರವನ್ನು ಮಾನ್ಯ ನ್ಯಾಯಾಲಯ ಸಲ್ಲಿಸಿದ್ದು, ಪ್ರಕರಣವು ವಿಚಾರಣೆಯಾಗಿ ಪ್ರಕರಣದ 1 ರಿಂದ 3 ನೇ ಆರೋಪಿತರು ಪ್ರಕರಣದಿಂದ ಖುಲಾಸೆಗೊಂಡಿರುತ್ತಾರೆ.
ಆದರೆ ಪ್ರಕರಣ 4 ನೇ ಆರೋಪಿ ಪಿ.ದಾಮೋದರ್ ಎಂಬಾತನು ತಲೆಮರೆಸಿಕೊಂಡಿರುವುದರಿಂದ ನ್ಯಾಯಾಲಯವು ಇತನ ವಿರುದ್ದ ಎಲ್.ಪಿ.ಸಿ ವಾರಂಟು ಹೊರಡಿಸಿರುತ್ತದೆ. ನಗರದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಇರುವ ವಾರಂಟು ಅಸಾಮಿಗಳು ಹಾಗೂ ಎಲ್.ಪಿ.ಸಿ ವಾರಂಟು ಅಸಾಮಿಗಳ ಪತ್ತೆಯ ಬಗ್ಗೆ ಕಾರ್ಯಾಚರಣೆಯನ್ನು ನಡೆಸಲಾಗುತ್ತಿದ್ದು, ಮಹಿಳಾ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿ ಭಾಲಕೃಷ್ಣ, ಪಿ.ಐ ಮತ್ತು ಸಿಬ್ಬಂದಿಗಳು ಸುಮಾರು 14 ವರ್ಷಗಳ ಕಾಲ ತಲೆಮರೆಸಿಕೊಂಡಿದ್ದ ಆರೋಪಿತ ಪಿ.ದಾಮೋದರ, ಪ್ರಾಯ: 40/2011 ವರ್ಷ, ತಂದೆಃ ಜಿ. ಗಂಗಾಧರ, ವಾಸಃ ಹೊಯಿಗೆ ಬಜಾರ್, ಮಂಗಳೂರು ಎಂಬಾತನನ್ನು, ಪತ್ತೆ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಿರುತ್ತಾರೆ. ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನವನ್ನು ವಿಧಿಸಿರುತ್ತದೆ.
2018 ನೇ ಸಾಲಿನಲ್ಲಿ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಾದ ವರದಕ್ಷಿಣಿ ಕಿರುಕುಳ ಪ್ರಕರಣದಲ್ಲಿ ಆರೋಪಿತ ಉಬೇದುಲ್ಲಾ ಎಂಬಾತನು ತನ್ನ ಹೆಂಡತಿಗೆ ಮಾನಸಿಕ ಹಾಗೂ ದೈಹಿಕ ಹಿಂಸೆ ನೀಡಿ ಕಿರುಕುಳ ನೀಡಿ, ಮದುವೆಯ ಸಮಯದಲ್ಲಿ ನೀಡಿದ ಚಿನ್ನಭಾರಣಗಳನ್ನು ತೆಗೆದುಕೊಂಡು ಹೋಗಿ ಮಾರಿ ನಂತರ ವಿದೇಶಕ್ಕೆ ಹೋಗಿ ಯಾವುದೇ ಫೋನ್ ಕರೆ ಮಾಡದೆ ಇದ್ದು, ಅಲ್ಲದೆ ಪತ್ನಿಯ ಫೋನ್ ಕರೆಗೂ ಸ್ಪಂದಿಸದೆ ಹಿಂಸೆ ನೀಡಿ ಅವಾಚ್ಯ ಶಬ್ದಗಳಿಂದ ಬೈದು ತೊಂದರೆ ಮಾಡಿರುವ ಬಗ್ಗೆ ನ.03-11-2018 ರಂದು ಮಹಿಳಾ ಪೊಲೀಸ್ ಠಾಣೆ ಅ.ಕ್ರ 54/2018 ಕಲಂ 498(ಎ) , 504 ರೀತ್ಯಾ ಪ್ರಕರಣವು ದಾಖಲಾಗಿತ್ತು.
ಪ್ರಕರಣದ ಆರೋಪಿ ಉಬೇದುಲ್ಲಾ, ಪ್ರಾಯ: 39/2018 ವರ್ಷ, ವಾಸ: ಲಿಟಲ್ ಫ್ಲವರ್ ಅಪಾರ್ಟ್ಮೆಂಟ್ ಕಂಕನಾಡಿ, ಮಂಗಳೂರು ಎಂಬಾತನ ವಿರುದ್ದ ಮಾನ್ಯ ನ್ಯಾಯಾಲಯಕ್ಕೆ ತಲೆಮರೆಸಿಕೊಂಡಿರುವ ಆರೋಪಿ ಎಂಬುದಾಗಿ ದೋಷಾರೋಪಣಾ ಪತ್ರವನ್ನು ಸಲ್ಲಿಸಿದ್ದು, ಆರೋಪಿಯ ವಿರುದ್ದ ಎಲ್.ಪಿ.ಸಿ ವಾರಂಟನ್ನು ಹೊರಡಿಸಲಾಗಿತ್ತು. ಆರೋಪಿಯು ಸುಮಾರು 7 ವರ್ಷಗಳ ಕಾಲ ತಲೆಮರೆಸಿಕೊಂಡಿರುತ್ತದೆ. ಜು. 29-07-2025 ರಂದು ಪ್ರಕರಣದಲ್ಲಿ ಆರೋಪಿಯು ಕೇರಳ ರಾಜ್ಯದ ಕಣ್ಣೂರು ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ವಿದೇಶದಿಂದ ಬರುತ್ತಿರುವುದಾಗಿ ಮಾಹಿತಿ ದೊರೆತಂತೆ ಆರೋಪಿತನನ್ನು ವಶಕ್ಕೆ ಪಡೆದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.








