ಮಂಗಳೂರು: ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತುಳುನಾಡಿನ ವೀರ ಆರಾಧನಾ ಪುರುಷರಾದ ಕೋಟಿ ಚೆನ್ನಯ್ಯರ ಹೆಸರಿಡಬೇಕೆಂದು ಹೋರಾಟ ನಡೆಸುತ್ತಿದ್ದ ಕಾಂಗ್ರೆಸ್ ಇದೀಗ ವಿಭಿನ್ನ ಹಾದಿ ತುಳಿದಿದೆ.
ಯುವ ಕಾಂಗ್ರೆಸ್ ಇದೀಗ ‘ಕೋಟಿ ಚೆನ್ನಯ್ಯ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸುಸ್ವಾಗತ’ ಅನ್ನೋ ಹೋರ್ಡಿಂಗ್ಸ್ ಗಳನ್ನ ಅಳವಡಿಸಿದ್ದು ಗಮನಸೆಳೆಯುವಂತಿದೆ. ವಿಮಾನ ನಿಲ್ದಾಣದ ಪ್ರವೇಶ ದ್ವಾರ, ನಿರ್ಗಮನ ದ್ವಾರ ಹಾಗೂ ಪ್ರಮುಖ ರಸ್ತೆಯ ಬಳಿ ದೊಡ್ಡದಾದ ಮೂರು ಹೋರ್ಡಿಂಗ್ಸ್ ಗಳನ್ನ ಅಳವಡಿಸಿದೆ.
ಎರಡು ಹೋರ್ಡಿಂಗ್ ಗಳಲ್ಲಿ ಯೂತ್ ಕಾಂಗ್ರೆಸ್ ದ.ಕ. ಜಿಲ್ಲಾಧ್ಯಕ್ಷ ಮಿಥುನ್ ರೈ ಹೆಸರಿದ್ದರೆ ಇನ್ನೊಂದರಲ್ಲಿ ಮಿಥುನ್ ರೈ ಜೊತೆ ಮಾಜಿ ಸಚಿವ ಅಭಯಚಂದ್ರ ಜೈನ್ ಅವರ ಹೆಸರೂ ಕಾಣಿಸಿಕೊಂಡಿದೆ. ಈ ಮೂಲಕ ಕಾಂಗ್ರೆಸ್ ವಿಭಿನ್ನ ಹೋರಾಟದ ಹಾದಿಯನ್ನ ಹಿಡಿದಿದ್ದು ಈ ಹಿಂದೆ ಮೂರು ಹಂತಗಳಲ್ಲಿ ಹೋರಾಟವನ್ನ ಕೈಗೆತ್ತಿಕೊಂಡಿತ್ತು.
ಕಳೆದ ವಾರವಷ್ಟೇ ಪಂಜಿನ ಮೆರವಣಿಗೆ ನಡೆಸುವ ಮೂಲಕ ತೀವ್ರ ಹೋರಾಟದ ಎಚ್ಚರಿಕೆಯನ್ನ ನೀಡಿತ್ತು. ಇನ್ನು ಹೋರ್ಡಿಂಗ್ ಅಳವಡಿಕೆ ಬಗ್ಗೆ ಮಾಹಿತಿ ನೀಡಿರುವ ಯೂತ್ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮಿಥುನ್ ರೈ, ಕಾಂಗ್ರೆಸ್ ಈಗಾಗಲೇ ‘ಅದಾನಿ ಏರ್ ಪೋರ್ಟ್’ ಹೆಸರಲ್ಲಿ ಇರುವ ವಿಮಾನ ನಿಲ್ದಾಣವನ್ನ ‘ಕೋಟಿ ಚೆನ್ನಯ್ಯ ಏರ್ ಪೋರ್ಟ್’ ಎಂದು ನಿರ್ಧರಿಸಿ ಆಗಿದೆ. ಇದರ ಮುಂದುವರಿದ ಭಾಗವಾಗಿ ಹೋರ್ಡಿಂಗ್ ಗಳನ್ನ ಅಳವಡಿಸಲಾಗಿದೆ” ಎಂದಿದ್ದಾರೆ.