ಮಂಗಳೂರು: ಹಲವಾರು ತಿಂಗಳಿನಿಂದ ಜನಜೀವನವನ್ನು ತಲ್ಲಣಗೊಳಿಸಿರುವ ಕೋವಿಡ್ ಪ್ರಕರಣ ನಿಯಂತ್ರಣಕ್ಕೆ ಬರುವ ಮೊದಲೇ ಜಿಲ್ಲೆಯಲ್ಲಿ ಡೆಂಗ್ಯೂ ಸಾಂಕ್ರಾಮಿಕ ಜ್ವರಬಾಧೆ ವಕ್ಕರಿಸಿದ್ದು ದೃಢ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದೆ.
ಕಳೆದ ಕೆಲವು ವರ್ಷಗಳಿಂದ ಬಾಧಿಸುತ್ತಿರುವ ಡೆಂಗ್ಯೂ ಈಗ ಕೊರೊನಾ ಕಾಲಘಟ್ಟದಲ್ಲಿ ಕಂಡು ಬಂದಿದ್ದು, ಈ ಎರಡಕ್ಕೂ ಏಕಕಾಲದಲ್ಲಿ ಚಿಕಿತ್ಸೆ ನೀಡಬೇಕಾದ ಸಂಕಟ ಆರೋಗ್ಯ ಇಲಾಖೆಯದ್ದಾದರೆ, ಇವೆರಡರ ಮಧ್ಯೆ ಚಿಕಿತ್ಸೆ ಪಡೆಯಬೇಕಾದ ಸಂಕಟ ಜನರದ್ದಾಗಿದೆ. ಅಕಾಲಿಕ ಮಳೆ ಸಾಂಕ್ರಾಮಿಕ ರೋಗವನ್ನು ಮತ್ತಷ್ಟು ಹೆಚ್ಚಿಸುವ ಸಾಧ್ಯತೆ ಇದೆ.
ದ.ಕ.ಜಿಲ್ಲೆಯಲ್ಲಿ ಈ ತನಕ 59 ಮಂದಿಗೆ ಡೆಂಗ್ಯೂ ದೃಢಪಟ್ಟಿದ್ದು, ಯಾವುದೇ ಸಾವು ನೋವು ಸಂಭವಿಸಿಲ್ಲ. 910 ಶಂಕಿತ ಪ್ರಕರಣ ವರದಿಯಾಗಿದೆ. ಪುತ್ತೂರಿನಲ್ಲಿ 14, ಸುಳ್ಯದಲ್ಲಿ 14, ಬಂಟ್ವಾಳ 11, ಮಂಗಳೂರಿನಲ್ಲಿ 8, ಕಡಬದಲ್ಲಿ 7, ಬೆಳ್ತಂಗಡಿ 5 ಪ್ರಕರಣಗಳು ದೃಢಪಟ್ಟಿದೆ. ಕಳೆದ ಒಂದು ತಿಂಗಳಿನಿಂದ ಡೆಂಗ್ಯೂ ಪ್ರಕರಣ ಏರಿಕೆ ಹಂತದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಇದು ಹರಡುತ್ತಿರುವ ತೀವ್ರತೆ ಏರಿಕೆ ಕಂಡಿದೆ ಎಂದು ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಆಶಾ ಕಾರ್ಯಕರ್ತೆ, ಆರೋಗ್ಯ ಕಾರ್ಯ ಕರ್ತೆಯರು ಮನೆ ಮನೆ ಭೇಟಿ ಮಾಡುವ ಸಂದರ್ಭದಲ್ಲಿ ಹೌಸ್ ಇಂಡೆಕ್ಸ್ ಆಧಾರದಲ್ಲಿ ಡೆಂಗ್ಯೂ ಬಾಧಿತ ಪ್ರದೇಶ ನಿರ್ಧರಿಸುತ್ತಾರೆ. ಸರ್ವೇ ಮಾಡಿದ ಮನೆಗಳ ಪೈಕಿ ಲಾರ್ವಾ ಕಂಡು ಬಂದ ಮನೆಗಳನ್ನು ಒಟ್ಟು ಮನೆಗಳೊಂದಿಗೆ ಹೋಲಿಕೆ ಮಾಡಿ ಬಾಧಿತ ಪ್ರದೇಶವನ್ನು ಗುರುತಿಸಲಾಗುತ್ತದೆ. ಉದಾಹರಣೆಗೆ 20 ಮನೆಗಳನ್ನು ಸರ್ವೇ ಮಾಡಿದಾಗ ಅದರಲ್ಲಿ 5 ಮನೆ ಪರಿಸರದಲ್ಲಿ ಲಾರ್ವಾ ಉತ್ಪಾದನೆ ಅಂಶ ಗೋಚರಿಸಿದರೆ ಆಗ ಅಲ್ಲಿ ರೋಗ ಹರಡುವ ಸಾಧ್ಯತೆ ಇದೆ ಎಂದು ಪರಿಗಣಿಸಲಾಗುತ್ತದೆ. 20 ರಲ್ಲಿ 1 ಮನೆಯಲ್ಲಿ ಲಕ್ಷಣ ಕಂಡುಬಂದಲ್ಲಿ ಹರಡುವ ಸಾಧ್ಯತೆ ಕಡಿಮೆ ಎಂದು ಗುರುತಿಸಿ ರೋಗ ನಿಯಂತ್ರಣಕ್ಕೆ ತತ್ಕ್ಷಣ ಕ್ರಮ ಕೈಗೊಳ್ಳಲು ಸೂಚಿಸಲಾಗುತ್ತದೆ.
ಡೆಂಗ್ಯೂ ಪ್ರಕರಣ ದೃಢಪಟ್ಟ ವ್ಯಕ್ತಿಯ ಪರಿಸರದಲ್ಲಿ 24 ತಾಸಿನೊಳಗೆ ಫಾಗಿಂಗ್ ಮೂಲಕ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಒಂದು ವಾರ ಬಿಟ್ಟು ಮಾಡಿದರೆ ಅದರಿಂದ ಪ್ರಯೋಜನ ಶೂನ್ಯ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ನಿಯಂತ್ರಣ ಕ್ರಮದ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಜ್ವರ ಇಡೀ ಊರಿಗೆ ಹರಡುವ ಸಾಧ್ಯತೆ ಇದೆ.
ಡೆಂಗ್ಯೂ, ಮಲೇರಿಯಾ ಲಾರ್ವಾಗಳ ನಿಯಂತ್ರಣಕ್ಕೆ ಗಪ್ಪಿ ಮೀನು ಬಳಕೆಗೆ ಆರೋಗ್ಯ ಇಲಾಖೆ ವಿನಂತಿಸಿದ್ದು, ಇವುಗಳು ಲಾರ್ವಾ (ಸೊಳ್ಳೆಯ ಮೊಟ್ಟೆ)ಯನ್ನು ತಿನ್ನುತ್ತವೆ. ಈ ಮೂಲಕ ಸೊಳ್ಳೆಗಳ ಉತ್ಪತ್ತಿಯನ್ನು ಆರಂಭದಲ್ಲೇ ನಿಯಂತ್ರಣ ಮಾಡಲು ಸಾಧ್ಯವಿದೆ. 1 ಸೆ.ಮೀ.ಉದ್ದ ಇರುವ ಈ ಮೀನುಗಳಿಗೆ ಲಾರ್ವಾಗಳೇ ಆಹಾರ. ಪ್ರತೀ ತಾಲೂಕು ಆರೋಗ್ಯ ಇಲಾಖೆಯಲ್ಲಿ ಈ ಮೀನನ್ನು ಉಚಿತವಾಗಿ ನೀಡಲಾಗುತ್ತಿದ್ದು ಮನೆ, ವಠಾರದಲ್ಲಿ ನೀರು ನಿಲ್ಲುವ ಅಥವಾ ಸಂಗ್ರಹಿಸುವ ಸಾಧನಗಳಲ್ಲಿ ಈ ಮೀನನ್ನು ಸಾಕಬೇಕು ಎಂದು ಆರೋಗ್ಯ ಇಲಾಖೆ ಹೇಳಿದೆ.