ಮಂಗಳೂರು: ವೃತ್ತಿಯಲ್ಲಿ ವೈದ್ಯನಾಗಿದ್ದರೂ ಸೂಪರ್ ಮಾರ್ಕೆಟ್ ಒಂದಕ್ಕೆ ಮಾಸ್ಕ್ ಧರಿಸದೆ ಹೋಗಿದ್ದ ವ್ಯಕ್ತಿ ತಾನು ಮಾರ್ಕೆಟ್ನಲ್ಲಿದ್ದಾಗ ಅಲ್ಲಿನ ಸಿಬ್ಬಂದಿ ಜೊತೆ ವಾದ ಮಾಡುತ್ತಿರುವ ಸಿಸಿಟಿವಿ ಫುಟೇಜನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಕ್ಕೆ ಮಾರ್ಕೆಟ್ ಮಾಲೀಕನ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
ಕೊವಿಡ್ ಸುರಕ್ಷತೆ ಹಿನ್ನೆಲೆಯಲ್ಲಿ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳು ಮೂರ್ಖತನವಲ್ಲದೆ ಬೇರೇನೂ ಅಲ್ಲ ಅಂತ ವೈದ್ಯರು ಮಾತಾಡಿರುವುದು ವೈರಲ್ ಆಗಿದೆ. ಬಿ ಶ್ರೀನಿವಾಸ್ ಕಕ್ಕಿಲಾಯ ಹೆಸರಿನ ವೈದ್ಯರು ಮಂಗಳೂರು ಪೂರ್ವ ಪೊಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.
ತಮ್ಮ ದೂರಿನಲ್ಲಿ ಅವರು ಸದರಿ ಘಟನೆಯನ್ನು ಸೂಪರ್ ಮಾರ್ಕೆಟ್ನವರು ಕಾನೂನುಬಾಹಿರವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ. ಅವರ ಕೃತ್ಯದಿಂದಾಗಿ ಹಲವಾರು ಜನ ತನ್ನ ಗೌರವಕ್ಕೆ ಚ್ಯುತಿ ಬರುವಂಥ ಹೇಳಿಕೆಗಳನ್ನು ನೀಡಿದ್ದಾರೆ ಮತ್ತು ಭಾರತದಲ್ಲಿ ಮಾತ್ರವಲ್ಲದೆ ಬೇರೆ ದೇಶಗಳ ಪತ್ರಿಕೆಗಳಲ್ಲೂ ಲೇಖನಗಳು ಪ್ರಕಟವಾಗಿವೆ ಎಂದ ಕಕ್ಕಿಲಾಯ ತಮ್ಮ ದೂರಿನಲ್ಲಿ ಹೇಳಿದ್ದಾರೆ.