ಈ ರಾಣಿಗೆ ಸರಕಾರಿ ಕಚೇರಿಯೇ ಮನೆ. ಸಿಬ್ಬಂದಿಗಳೇ ಪ್ರೀತಿ ಪಾತ್ರರು. ನಿತ್ಯ ಪ್ರೀತಿಯ ಆರೈಕೆ. ಕಚೇರಿಯೇ ಅರಮನೆ. ಕಾವಲಿನ ಜವಾಬ್ದಾರಿಯೂ ಈಕೆಯದ್ದೇ. 11 ವರ್ಷ ರಾಣಿಯಾಗಿ ಮೆರೆದಾಕೆ ಈಗ ಮಣ್ಣಾಗಿದ್ದಾಳೆ. ಅಧಿಕಾರಿ, ಸಿಬಂದಿ ಕಣ್ಣಂಚಲ್ಲಿ ನೀರು ತರಿಸಿ ಅಚ್ಚಳಿಯದ ನೆನಪು ಉಳಿಸಿ ಹೋದಾಕೆ ಈ ರಾಣಿ. ಅಷ್ಟಕ್ಕೂ ಈ ರಾಣಿ ಯಾರು ಮುಂದೆ ಓದಿ.
ಮಂಗಳೂರು ನಗರದಲ್ಲಿರುವ ಕರ್ನಾಟಕ ಜಲಮಂಡಳಿಯ ಕಚೇರಿಯಲ್ಲಿ ಕಳೆದ 11 ವರ್ಷಗಳಿಂದ ಓಡಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ರಾಣೆ ಮೇ 21 ರಂದು ಅಸುನೀಗಿದ ರಾಣಿ ಹೆಸರಿನ ನಾಯಿ ಪ್ರೀತಿಯ ನೈಜ ಕಥೆಯಿದು.
ದಶಕದ ಹಿಂದೆ ಎಲ್ಲಿಂದಲೋ ಬಂದ ಸಣ್ಣ ಮರಿಯನ್ನು ಸಿಬಂದಿ ಕಚೇರಿಯ ಒಳಗಿಟ್ಟು ಪ್ರೀತಿಯಿಂದ ಸಲಹಿದ್ದರು. ಕೊರೊನಾ ಆತಂಕದ ನಡುವೆಯೂ ರಾಣಿಯ ಮೇಲೆ ಅವರು ಹೊಂದಿದ್ದ ಗಾಢ ಸ್ನೇಹಕ್ಕೆ ಸಾಕ್ಷಿ ಎನ್ನುವಂತೆ ಅಂತ್ಯಸ0ಸ್ಕಾರವನ್ನು ಶಾಸ್ತ್ರೋಕ್ತವಾಗಿ ಜಲಮಂಡಳಿ ಕಚೇರಿ ಸಮೀಪವೇ ನೆರವೇರಿಸಲಾಗಿದೆ. ಕೆಲವು ಸಿಬ್ಬಂದಿಯ0ತೂ 13 ದಿನಗಳ ಕಾಲ ಶೋಕಾಚರಿಸಿದ್ದರು.
ಈ ಕಚೇರಿಗೆ ಕಾವಲುಗಾರರಿದ್ದರೂ ಅವರಿಗಿಂತ ಮುಂದೆ ಇರುತ್ತಿದ್ದವಳು ರಾಣಿ. ಯಾರೇ ಹೊಸಬರು ಬಂದರೂ ಗದರಿಸುತ್ತಿತ್ತು. ರಾತ್ರಿ ವೇಳೆ ಅಪರಿಚಿತರಾರನ್ನೂ ಕಚೇರಿ ಬಳಿ ಸುಳಿಯಲು ಬಿಡುತ್ತಿರಲಿಲ್ಲ ಎನ್ನುತ್ತಾರೆ ಜಲಮಂಡಳಿಯ ಉದ್ಯೋಗಿಗಳು.ರಾಣಿಯ ಜತೆಗೆ ಕಚೇರಿಯಲ್ಲಿ 4 ಬೆಕ್ಕುಗಳೂ ಇದ್ದು, ಉತ್ತಮ ಒಡನಾಟ ಹೊಂದಿತ್ತು. ಪ್ರೀತಿ ತೋರಿಸದೇ ಇರುವವರು ಎಷ್ಟೇ ಒಳ್ಳೆಯ ಆಹಾರ ನೀಡಿದರೂ ಅದನ್ನು ತಿನ್ನಲು ಒಪ್ಪುತ್ತಿರಲಿಲ್ಲ ಎಂದು ಗದ್ಗದಿತರಾಗುತ್ತಾರೆ ಇಲ್ಲಿನ ಸಿಬಂದಿ.
ಕಚೇರಿಗೆ ಹೊಸದಾಗಿ ವರ್ಗವಾಗಿ ಬರುವವರು ಕೂಡ ರಾಣಿಯನ್ನು ನಾಯಿ ಎಂದು ಕರೆಯುವಂತಿರಲಿಲ್ಲ. ನೀಡುವ ಊಟ ಕೂಡ ಎಂಜಲು ಅಥವಾ ಹಳಸಿದ್ದು ಆಗಿರಬಾರದು ಎಂಬ ನಿಯಮ ಇತ್ತು. ಎಲ್ಲರೂ ತಮ್ಮ ಊಟದ ಪಾಲು ಅಥವಾ ಅದಕ್ಕೆಂದೇ ಪ್ರೀತಿಯಿಂದ ಆಹಾರ ತಂದು ಕೊಡುತ್ತಿದ್ದರು. ನಿಯಮಿತವಾಗಿ ಸ್ನಾನ, ಔಷಧೋಪಚಾರ ಮಾಡಲಾಗುತ್ತಿತ್ತು.
ಎಲ್ಲರಲ್ಲಿ ಒಂದಾಗಿದ್ದ ಈ ಮುದ್ದು ಶ್ವಾನ ಎಲ್ಲರನ್ನು ಅಗಲಿ ಬಾರದ ಲೋಕಕ್ಕೆ ತೆರಳಿದೆ. ಆದರೆ ಬಿಟ್ಟು ಹೋದ ಅಮೂಲ್ಯ ನೆನಪು ಮಧುರ… ಅಮರ..!