ಮಂಗಳೂರು : ಬೆಳ್ತಂಗಡಿ ತಾಲೂಕಿನ ನೆರಿಯ ಗ್ರಾಮದ ನೆಕ್ಕರೆಯ ಯುವತಿಯೋರ್ವಳು ಮಂಗಳೂರಿನ ಕುಲಶೇಖರದ ಬಾಡಿಗೆ ಮನೆಯಲ್ಲಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.
ನೆರಿಯ ಗ್ರಾಮದ ನೆಕ್ಕರೆ ನಿವಾಸಿ ದಾಸ್ ಎಂಬವರ ಪುತ್ರಿ ಅದೀರಾ (19ವ), ಪುತ್ರ ನರೇಂದ್ರ ಮತ್ತು ಅಣ್ಣನ ಮಗ ರೋಹಿತ್ ಅವರು ಕಳೆದ ಮೂರು ತಿಂಗಳಿನಿಂದ ಮಂಗಳೂರಿನ ಕುಲಶೇಖರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದು, ಅದಿರಾ ಖಾಸಗಿ ಕಾಲೇಜಿನಲ್ಲಿ ಮೊದಲನೇ ವರ್ಷದ ಪ್ಯಾರಮೆಡಿಕಲ್ ವ್ಯಾಸಂಗ ಮಾಡುತಿದ್ದರು. ಜೂ. 18 ರಂದು ಆದಿತ್ಯವಾರ ರಾತ್ರಿ ಮೂವರು ಒಟ್ಟಿಗೆ ಊಟ ಮಾಡಿ ಒಂದು ಕೋಣೆಯಲ್ಲಿ ಅದಿರಾ ಮಲಗಿದ್ದು ಮತ್ತೊಂದು ಕೋಣೆಯಲ್ಲಿ ನರೇಂದ್ರ ಮತ್ತು ರೋಹಿತ್ ಮಲಗಿದ್ದರೆನ್ನಲಾಗಿದೆ.
ಜೂನ್ 19 ಸೋಮವಾರ ಬೆಳಗ್ಗೆ 8 ಗಂಟೆಗೆ ಎದ್ದು ನರೇಂದ್ರ ನೋಡುವಾಗ ಅದಿರಾ ತನ್ನ ಚೂಡಿದಾರ್ ಶಾಲಿನಲ್ಲಿ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ ಕಂಡು ಬಂದಿದ್ದು ತಕ್ಷಣ ತಂದೆ ದಾಸ್ ಅವರಿಗೆ ಈ ಬಗ್ಗೆ ತಿಳಿಸಿದ್ದಾರೆ. ಅವರು ಬಂದು ಸ್ಥಳೀಯರ ಸಹಕಾರದಲ್ಲಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ಮಗಳನ್ನು ಕೊಂಡು ಹೋಗಿದ್ದಾರೆ. ಅಲ್ಲಿ ಆಕೆಯನ್ನು ಪರೀಕ್ಷಿಸಿದ ವೈದ್ಯರು ಯುವತಿ ಮೃತಪಟ್ಟಿರುವುದಾಗಿ ಧೃಡಪಡಿಸಿದ್ದಾರೆ. ಈ ಬಗ್ಗೆ ಯುವತಿಯ ತಂದೆ ದಾಸ್ ಅವರು ಯಾವುದೋ ಕಾರಣಕ್ಕಾಗಿ ಮಗಳು ಮನನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳುವಂತೆ ಕಂಕನಾಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು ಪೊಲೀಸರು ಯುವತಿಯ ಮೊಬೈಲ್ ವಿವರಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ.